(ಇನ್ನು ಮುಂದೆ ಅರುಣ್ ಜೋಳದಕೂಡ್ಲಿಗಿ ತನ್ನ "ಕವಿ ಕಾಲಂ" ಮೂಲಕ ಕನ್ನಡದ ಇಷ್ಡಪಡಬಹುದಾದ ಕವನಗಳನ್ನು ನಿಮ್ಮ ಮುಂದೆ ತರಲಿದ್ದಾರೆ. ಈ ಕಾಲಂ ನ್ನು ಅವನ ಕವನದಿಂದಲೇ ಪ್ರಾರಂಬಿಸುತ್ತಿದ್ದೇವೆ.)
ಇದು ನೆಲದ ಜೊತೆ ಜೀವ ಬೆಸೆದವರ
ಕಟ್ಟಕಡೆಯ ಕನಸು
ಆಕಾಶದ ಆಷ್ಟೂ ನಕ್ಷತ್ರಗಳಿಂದ
ಹಗ್ಗಗಳು ಚಾಚಿಕೊಂಡವು.
ನಕ್ಷತ್ರ ಬಿಳಲುಗಳ ಕಂಡು ವಿಜ್ಙಾನ ಬೆರಗಾಯಿತು.
ಕೆಲವರು ಜೋಕಾಲಿ ಕಟ್ಟಿ ಪ್ರಿಯರ ಕೂರಿಸಿ ತೂಗಿದರು
ಸರಕಾರ ಇಳಿಬಿದ್ದ ಹಗ್ಗಗಳ
ಕೊಯ್ದು ಹಾಕಲು ಕೂಲಿಗಳಿಗೆ ಗುತ್ತಿಗೆ ಕೊಟ್ಟಿತು.
ಇನ್ನು ಕೆಲವರು ಹಗ್ಗ ಹಿಡಿದು ನಕ್ಷತ್ರ ಸಿಗುವವರೆಗೂ
ಮೇಲೇರುತ್ತಲೇ ಕಣ್ಮರೆಯಾದರು
ಕವಿಯೊಬ್ಬ ಬರೆದ ಇದು ಮಳೆಯ ಹಗ್ಗದಾ ಕನಸು.
ನೆಲವೆ ಹೊರೆಯಾದ ರೈತರೆಲ್ಲಾ ಜೊತೆಯಾದರು
ನಕ್ಷತ್ರದ ಬಿಳಲುಗಳಿಗೆ ವಂದಿಸಿದರು
ಜೋತು ಬೀಳುವ ತಮ್ಮ ಭಾರ ಹೊರುವ
ಶಕ್ತಿಯು ನಕ್ಷತ್ರಗಳಿಗೆ ಬರಲೆಂದು ಮೊರೆಯಿಟ್ಟರು !
ಚಾಕಚಕ್ಯತೆಯಲ್ಲಿ ಸರಗುಣಿಕಿ ಹಾಕಿದರು
ಎಲ್ಲರೂ ಕುತ್ತಿಗೆಗೆ ಬಿಗಿದು ಸಿದ್ದವಾದರು
ನೆಲವೇ ಇಂಚಿಂಚು ಕುಸಿಯತೊಡಗಿತು !
2 ಕಾಮೆಂಟ್ಗಳು:
ಸರ್,
ಕವನ ತುಂಬಾ ಚೆನ್ನಾಗಿದೆ...
ನಕ್ಷತ್ರ ಬಿಳಲುಗಳ ಕಂಡು ವಿಜ್ಙಾನ ಬೆರಗಾಯಿತು. ಸಾಲುಗಳು ನನಗೆ ಮೆಚ್ಚಿಗೆಯಾದವು...
ಎಲ್ಲರೂ ಕುತ್ತಿಗೆಗೆ ಬಿಗಿದು ಸಿದ್ದವಾದರು
ನೆಲವೇ ಇಂಚಿಂಚು ಕುಸಿಯತೊಡಗಿತು !
ಸಾಲುಗಳು ಧ್ವನಿಸುವ ಅರ್ಥ ಬೆರಗು ಹುಟ್ಟಿಸಿತು. ಅರುಣ್ ಗೆ ಥ್ಯಾಂಕ್ಸ್... ಹಾಗೇ ನಿರಂಜನ್ ನಿಮಗೂ....
ಕಾಮೆಂಟ್ ಪೋಸ್ಟ್ ಮಾಡಿ