ಶುಕ್ರವಾರ, ಏಪ್ರಿಲ್ 17, 2009

ಕಾಡುವ ಕತೆಗಳು




(ಸ್ನೇಹಿತರಾದ ಚಿದಾನಂದ ಸಾಲಿಯವರ ಕಥಾ ಸಂಕಲನ ಮತ್ತು ಡಾ.ಆನಂದ್ ಋಗ್ವೇದಿಯವರ ವಿಮರ್ಶಾ ಸಂಕಲನಗಳನ್ನು ಮುದ್ದಾದ ಮುದ್ರಣ, ಮೌಲಿಕ ಪ್ರಕಟಣೆಗೆ ಮತ್ತು ಆತ್ಮೀಯ ಸ್ನೇಹಕ್ಕೆ ಹೆಸರಾದ ಪಲ್ಲವ ಪ್ರಕಾಶನದ ಡಾ.ಕೆ.ವೆಂಕಟೇಶ್ ರವರು ಹೊರತರುತ್ತಿರುವ ಸಂದರ್ಭದಲ್ಲಿ ಎರಡು ಪುಸ್ತಕಗಳ ಮುಖಪುಟಗಳು ಮತ್ತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಸಾಲಿ’ಯವರ ಕಥಾಸಂಕಲನದ ದೇವು ಪತ್ತಾರರ ವಿಮರ್ಶೆ ನಿಮಗಾಗಿ)


ಸಿದ್ಧ ವಿನ್ಯಾಸದಿಂದ ‘ಮುಕ್ತ’ವಾದ ಕಥೆಗಳು ‘ಎಲೆಯುದುರುವ ಕಾಲ’ ಎಂಬ ಅನುವಾದಿತ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಧಿಕೃತ ಪ್ರವೇಶ ಪಡೆದ ಚಿದಾನಂದ ಸಾಲಿ ನಂತರ ‘ಮೌನ’ ಎಂಬ ಗಜಲ್ ಸಂಕಲನ ಪ್ರಕಟಿಸಿದರು. ಅದಕ್ಕೂ ಮುನ್ನ ಅಂದರೆ ಸುಮಾರು ದಶಕದ ಹಿಂದೆಯೇ ‘ಪ್ರಜಾವಾಣಿ’ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆಯುವ ಮೂಲಕ ‘ಕಥೆಗಾರ’ ಎಂದು ಗುರುತಿಸಿಕೊಂಡಿದ್ದ ‘ಸಾಲಿ’ ಅನುವಾದ, ಗಜಲ್‌ಗಳ ಕಡೆಗೆ ಮುಖ ಮಾಡಿದ್ದರು. ‘ಕೊಟ್ಟ ಕುದುರೆಯನೇರಲರಿಯದೆ’ ಅಂತಹ ಓದಿಸಿಕೊಳ್ಳುವ ಗುಣವುಳ್ಳ ಉತ್ತಮ ಕಥೆ ಬರೆದಿದ್ದ ಕಥೆಗಳ ವಿಷಯಕ್ಕೆ ಮೌನವಾದರೇನೋ ಅನ್ನಿಸತೊಡಗಿತ್ತು. ಆದರೆ, ನಾಡಿನ ಪ್ರಮುಖ ದೈನಿಕಗಳ ಪುರವಣಿ ಮತ್ತು ವಾರಪತ್ರಿಕೆಗಳಲ್ಲಿ ಕಥೆ ಪ್ರಕಟಿಸುವ ಮೂಲಕ ‘ಅಸ್ತಿತ್ವ’ ತೋರಿಸುತ್ತ ಬಂದಿದ್ದರು. ಕಥಾಸ್ಪರ್ಧೆಯ ಬಹುಮಾನ ಪಡೆಯುವ ಮೂಲಕ ಸಾಮರ್ಥ್ಯ ಸಾಬೀತು ಪಡಿಸಿದ್ದರು.

ಪ್ರತಿಯೊಂದು ಕಥೆಯೂ ಹೊಸ ಜೀವನಾನುಭವ ಕಟ್ಟಿಕೊಡುವ ‘ಪ್ರಯೋಗ’ ಎಂದು ಭಾವಿಸುವ ಕಥೆಗಾರ ಮಾತ್ರ ಚೌಕಟ್ಟುಗಳನ್ನು ಮೀರಿ ತನ್ನದೇ ಹೊಸ ಕಥೆ ಕಟ್ಟಬಲ್ಲ. ಚಿದಾನಂದ ಸಾಲಿ ತಮ್ಮ ಮೊದಲ ‘ಧರೆಗೆ ನಿದ್ರೆಯು ಇಲ್ಲ’ ಕಥಾಸಂಕಲನದ ಮೂಲಕ ತಾವು ಕೇವಲ ಸ್ಪರ್ಧೆಗಾಗಿ ಬರೆಯುವ ಕಥೆಗಾರ ಅಲ್ಲ ಎಂಬುದನ್ನು ದೃಢಪಡಿಸಿದ್ದಾರೆ. ಸಂಕಲನದ ಎಲ್ಲ ಕಥೆಗಳೂ ಒಂದಕ್ಕಿಂತ ಮತ್ತೊಂದು ವಸ್ತು, ವಿಷಯ, ನಿರ್ವಹಣೆ ಮತ್ತು ತಂತ್ರದ ದೃಷ್ಟಿಯಿಂದ ಭಿನ್ನವಾಗಿವೆ. ವೈವಿಧ್ಯತೆಯೇ ಇಲ್ಲಿನ ಕಥೆಗಳ ಜೀವಾಳ. ಕನ್ನಡದ ಅಥವಾ ಹೈದರಾಬಾದ್ ಕರ್ನಾಟಕದ ಕಥೆಗಾರರ ಸಿದ್ಧವಿನ್ಯಾಸದ ಹೆಜ್ಜೆ ನಾಡಿನಲ್ಲಿ ನಡೆಯಬಯಸದ ‘ಸಾಲಿ ಮಾಸ್ತರ’ ತನ್ನದೇ ಹೊಸ ದಾರಿ ಕಂಡುಕೊಂಡಿದ್ದಾರೆ.

‘ಕೊಟ್ಟ ಕುದುರೆಯನೇರಲರಿಯದೆ’ ಮತ್ತು ‘ಆಸೆಯೆಂಬ ತಥಾಗತನ ವೈರಿ’ ಕಥೆಗಳು ಸಂಕಲನದಲ್ಲಿ ಗಮನ ಸೆಳೆಯುವ ಗಂಭೀರ ಕಥೆಗಳು. ಬದುಕಿನ ನಗ್ನಸತ್ಯವನ್ನು ಯಾವುದೇ ಮುಜುಗರಕ್ಕೆ ಎಡೆಯಿಲ್ಲದಂತೆ ಬಿಚ್ಚಿಡುವ ಈ ಎರಡು ಕಥೆಗಳು ವಸ್ತು ಮತ್ತು ನಿರ್ವಹಣೆಯ ದೃಷ್ಟಿಯಿಂದ ಮಹತ್ವ ಪಡೆಯುತ್ತವೆ. ಸೂಕ್ಷ್ಮ ಸಂವೇದಿ ಓದುಗನನ್ನು ಈ ಎರಡು ಕಥೆಗಳು ಡಿಸ್ಟರ್ಬ್ ಮಾಡಿಬಿಡುತ್ತವೆ ಮತ್ತು ಯೋಚನೆಗೆ ಹಚ್ಚುತ್ತವೆ.

ಸಲಿಂಗ ಕಾಮದ ಸುತ್ತ ಹೆಣೆದಿರುವ ‘ಒಳಗಿನೊಳಗಿನ ಒಳಗೆ’ ಕಾವ್ಯಾತ್ಮಕ ನಿರೂಪಣೆಯಿಂದ ಪ್ರಿಯವಾಗುತ್ತದೆ. ‘ಹಿಪಾಕ್ರಸಿ’ ಕೇಂದ್ರವಾಗಿಟ್ಟುಕೊಂಡ ‘ಕಾಗೆಯೊಂದಗುಳ ಕಂಡರೆ’ ಮತ್ತು ‘ಅಂಬರದೊಳಗಾಡುವ ಗಿಳಿ’ ಕಥೆಗಳು ಸಭ್ಯ-ಅಸಭ್ಯಗಳನ್ನು ಮುಖಾಮುಖಿಯಾಗಿಸಿ ರೂಢಿಗತ ನಂಬಿಕೆಯನ್ನು ಹುಸಿ ಮಾಡುತ್ತವೆ.

ನಿರೀಕ್ಷಿತ ಅಂತ್ಯ ತೋರಿಸುವ ನಿಶ್ಚಿತ ಉದ್ದೇಶವಿರುವ ‘ಕಳ್ಳಗಂಜಿ ಕಾಡ ಹೊಕ್ಕರೆ..’ ಕಥೆಯಲ್ಲಿ ಪ್ರಬಂಧ ಧ್ವನಿಯಿದೆ. ‘ಮನಸೂಂದ್ರೆ ನಾಕೊಂದ್ಲೆ ನಾಕಲ್ಲ’ ಕಥೆಯ ತಂತ್ರ ಅತ್ಯಂತ ವಿಶಿಷ್ಟವಾದದ್ದಾಗಿದೆ. ಮನಸ್ಸು ಮತ್ತು ಬುದ್ಧಿಗಳ ನಡುವಿನ ತಾಕಲಾಟ ಮತ್ತು ಆ ನಂತರ ಅದಕ್ಕೆ ಘಟನೆಯನ್ನು ಬೆಸೆಯುವ ಮೂಲಕ ಹೇಳಿದ ಕಥೆ ಮನತಟ್ಟುತ್ತದೆ. ‘ತಾಯ ಮೊಲೆವಾಲು ನಂಜಾಗಿ ಕೊಲುವೆಡೆ’ ಕಥೆಯು ಘಟನೆಯೊಂದನ್ನು ಕಥೆಯಾಗಿಸುವ ಪ್ರಯತ್ನದಂತೆ ಕಾಣಿಸುತ್ತದೆ. ಆದರೆ. ಅದರಾಚೆಗೆ ಬೆಳೆದು ನಿಲ್ಲುವ ಕಥೆಯು ತನ್ನದೇ ಅರ್ಥದ ಸಾಧ್ಯತೆಗಳನ್ನು ಬಿಚ್ಚಿಡುತ್ತ ಹೋಗುತ್ತದೆ.

ಈ ಸಂಕಲನದ ಕಥೆಗಳ ಭಾಷೆಯ ಬಗ್ಗೆ ಬರೆಯದಿದ್ದರೆ ಅಪೂರ್ಣವಾಗುತ್ತದೆ. ಕಾವ್ಯಾತ್ಮಕ ಪದಗಳ ಬಳಕೆ, ಸೂಚ್ಯವಾಗಿ ಹೇಳುವ ರೀತಿ ಅಪ್ಯಾಯಮಾನವಾಗಿದೆ. ಭಾವಗೀತಾತ್ಮಕ ನಿರೂಪಣೆ ಇಲ್ಲಿನ ಕಥೆಗಳ ಓದನ್ನು ಸಹ್ಯವಾಗಿಸುತ್ತದೆ. ಶಂಕರಗೌಡ ಬೆಟ್ಟದೂರು ಅವರ ಕಲಾಕೃತಿಗಳನ್ನು ಒಳಗೊಂಡ ಆಕರ್ಷಕ ಮುಖಪುಟ ಮತ್ತು ಅಷ್ಟೇ ಸೊಗಸಾದ ಮುದ್ರಣ ಗಮನ ಸೆಳೆಯುತ್ತವೆ. ತಪ್ಪಿಲ್ಲದಂತೆ ಅಥವಾ ಮುದ್ರಣದೋಷಗಳಾಗದಂತೆ ವಹಿಸಿದ ಕಾಳಜಿ ಎದ್ದು ಕಾಣಿಸುತ್ತದೆ.

-ದೇವು ಪತ್ತಾರ

2 ಕಾಮೆಂಟ್‌ಗಳು:

shivu.k ಹೇಳಿದರು...

ಇವೆರಡು ಪುಸ್ತಕಗಳನ್ನು ಓದುವ ಮನಸ್ಸಾಗುತ್ತಿದೆ..

Unknown ಹೇಳಿದರು...

nammolagina kavigala nava bhavayaanadali sahrudahiyaagi saaguva hambala talamalisutide abhnandana poorvaka danyavaadagalu kavivaryarige.......