ಶನಿವಾರ, ಫೆಬ್ರವರಿ 28, 2009


ಮಾಮೂಲಿ ಗಾಂಧಿ

(ಆತ್ಮೀಯ ಸ್ನೇಹಿತ ಕಲಿಗಣನಾಥ ಗುಡುದೂರ ರ ಕಥಾಸಂಕಲನ ಬಿಡುಗಡೆ ನಾಳೆ,ಅವರು ಯಾವಾಗಲು ಹೀಗೆ ಬರೆಯುತ್ತಿರಲೆಂದು ಹಾರೈಕೆ.)




ನನ್ನೊಳಗಿನ ಹಿರಿಯ ಜೀವವೆಂಬ ಮೋಹನ್ ಸರ್,
ನಮಸ್ಕಾರಗಳು. ನಿಮ್ಮ ಪ್ರೀತಿಯಿಂದ ನಾನು ಕನ್ನಡ ಕಥಾಲೋಕಕ್ಕೆ ಪರಿಚಯವಾಗಿದ್ದನ್ನು ಎಂದೆಂದೂ ಮರೆಯಲಾರದ್ದು. ನಿಮ್ಮ ಸಲಹೆ, ಪ್ರೀತಿಯನ್ನುಂಡು ಬರೆಯುತ್ತಿರುವೆ. ಮಾ.೧ರಂದು ನನ್ನ ಮೂರನೇ ಕಥಾ ಸಂಕಲನ ಬಿಡುಗಡೆಯಾಗಲಿದೆ. ನಿಮ್ಮೊಂದಿಗೆ ಈ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ನಿಮ್ಮವ
ಕಲಿಗಣನಾಥ ಗುಡದೂರು

’ಮಾಮೂಲಿ ಗಾಂಧಿ’ ಮಾ.೧ರಂದು ಬಿಡುಗಡೆಯಾಗುತ್ತಿದೆ...
ನಿಮ್ಮೊಂದಿಗೆ ಕೆಲ ನಿಮಿಷ ನನ್ನ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುವ ದಿನ ಬಂದಿದೆ. ’ನೀನು ಕಥೆಗಳನ್ನು ಬರೆಯುತ್ತಾ ಇರಬೇಕು...’ ಎಂಬ ಗೆಳೆಯರ ಮತ್ತು ಹಿರಿಯ ಹಿತೈಷಿಗಳೆಲ್ಲರ ಬೆನ್ನು ತಟ್ಟಿದ್ದಕ್ಕೆ ಕೇವಲ ಪುಳುಕಿತನಾಗದೆ, ನಿಮ್ಮ ಕೈಗಳಿಗೆ ಮಾ.೧,೨೦೦೯ರಂದು ’ಮಾಮೂಲಿ ಗಾಂಧಿ’ ರೂಪದಲ್ಲಿ ಮೂರನೇ ಕಥಾ ಸಂಕಲನ ನೀಡುತ್ತಿದ್ದೇನೆ. ಕಳೆದ ವರ್ಷ ಅನುಭವಿಸಿದ ತಲ್ಲಣಗಳ ಮರೆಯಲು ’ಮಾಮೂಲಿ ಗಾಂಧಿ’ ಕಥೆಗಳನ್ನು ರಚಿಸಿದ್ದೇನೆ. ಇಲ್ಲಿ ಬರೆದ ಬಹುತೇಕ ಕಥೆಗಳು ಹೊಚ್ಚ ಹೊಸವು. ಮೊದಲನೇ ಕಥಾ ಸಂಕಲನ ’ಉಡಿಯಲ್ಲಿಯ ಉರಿ’ ಇನ್ನೂ ಈಗಲೂ ತನ್ನ ಕಿಚ್ಚನ್ನು ಹೊತ್ತಿಸುತ್ತಿದೆ ಎಂಬುದಕ್ಕೆ ಫೆ.೨೬ರಂದು ’ಸಂಯುಕ್ತ ಕರ್ನಾಟಕ’ ಪತ್ರಿಕೆಯ ಕಥಾಲೋಕ ಅಂಕಣದಲ್ಲಿ ಹಿರಿಯ ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ಉಡಿಯಲ್ಲಿಯ ಉರಿ ಬಗ್ಗೆ ಮತ್ತೊಮ್ಮೆ ಆಪ್ತವಾಗಿ ಬರೆದು, ನನ್ನಂತ ಕಥೆಗಾರರ ಕಥೆಗಳನ್ನು ಓದುವ, ವಿಮರ್ಶಿಸುವ ಹೃದಯವಂತಿಕೆ ಹಿರಿಯರಲ್ಲಿ ಬೆಳೆಯಬೇಕು ಎಂಬುದನ್ನು ಹೇಳಿದ್ದಾರೆ. ಎರಡನೇ ಕಥಾ ಸಂಕಲನ ’ಮತಾಂತರ’ದ ಪ್ರತಿಗಳಿಗಾಗಿ ಈಗಲೂ ಅನೇಕರು ಕೇಳುತ್ತಿರುತ್ತಾರೆ. ಆದರೆ ಪ್ರತಿಗಳೆಲ್ಲಾ ಮುಗಿದಿವೆ. ಎರಡು ಕಥಾ ಸಂಕಲನಗಳಲ್ಲಿದ್ದ ಕಥೆಗಳಿಗಿಂತ ಒಂದಷ್ಟು ಮಟ್ಟಿಗೆ ಕಥಾ ಹಂದರದಲ್ಲಿ ಹೊಸತನ ಸಾಧಿಸುವ ಪ್ರಯತ್ನ ’ಮಾಮೂಲಿ ಗಾಂಧಿ’ ಕಥಾಸಂಕಲನದಲ್ಲಿ ಮೂರ್ತ ರೂಪ ತಾಳಿದೆ. ಫೆಬ್ರುವರಿ-೦೯ರ ಮಯೂರದಲ್ಲಿ ’ಕನ್ನಡಿಯೊಳಗಿನ ಚಿತ್ರಗಳು’ ಕಥೆ ಪ್ರಕಟವಾದಾಗ, ಈ ಹಿಂದೆ ಬರೆದ ಎಲ್ಲ ಕಥೆಗಳಿಗಿಂತ ತೀರಾ ಭಿನ್ನವಾಗಿ ಬರೆದಿದ್ದಿ. ಈ ರೀತಿಯ ಹೊಸತನ ಕನ್ನಡ ಕಥಾ ಲೋಕಕ್ಕೆ ಅವಶ್ಯ ಎಂಬುದನ್ನು ಅನೇಕ ಗೆಳೆಯರು ನನ್ನೊಂದಿಗೆ ಹಂಚಿಕೊಂಡಿದ್ದರು. ಆ ಕಥೆ ಇನ್ನೇನು ತಿಂಗಳ ಕಥೆಯಾಗಿ ಆಯ್ಕೆಯಾಗುತ್ತೆ ಎಂದೇ ಹಲವು ಗೆಳೆಯರು ಕನಸು ಕಟ್ಟಿದ್ದರು. ರನ್ನರ್ ಅಪ್‌ಗೆ ಸಂತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಆ ಕಥೆಯ ಬಗ್ಗೆ ಹಿರಿಯ ವಿಮರ್ಷಕರಾದ ಎಚ್.ಎಸ್.ರಾಘವೇಂದ್ರರಾವ್ ಬರೆದದ್ದು ಹೀಗೆ... "ಅತಿ ನಿಕಟವಾದ ವರ್ತಮಾನವನ್ನು ತೆಗೆದುಕೊಂಡು ಕಥೆ ಬರೆಯುವುದು ದೊಡ್ಡ ಸವಾಲು. ’ಕನ್ನಡಿಯೊಳಗಿನ ಚಿತ್ರಗಳು’ ಕಥೆಯು ಇಂತಹ ಸವಾಲನ್ನು ಸ್ವೀಕರಿಸುತ್ತದೆ. ಇದರಲ್ಲಿ, ಕಲಾವಿದನೂ ಆದ ನಕ್ಸಲೀಯನು ತನ್ನ ಕಲೆ ಮತ್ತು ಮಾನವೀಯತೆಗಳ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಾನೆ. ಆದರೆ, ಅವನ ವರ್ತನೆಯ ಹಿಂದೆ ಯಾವುದೇ ಅಜೆಂಡಾ ಕಾಣಿಸುವುದಿಲ್ಲ. ಬದಲಾಗಿ ಅಲ್ಲಿ ಹುಂಬವೆನ್ನಿಸುವ ಒಳ್ಳೆಯತನವಿದೆ. ವ್ಯವಸ್ಥೆಯ ಕ್ರೌರ್ಯವು ಎಲ್ಲರಿಗೂ ತಿಳಿದಿರುವುದೇ. ಆದರೆ ಈ ಕಥೆಯಲ್ಲಿ ಭೀಭತ್ಸ, ಮಾನವತೆ ಮತ್ತು ಕ್ರೌರ್ಯಗಳ ಓವರ್‌ಡೋಸ್ ಇರುವುದರಿಂದ ಕಥೆಯ ವಾಚನೀಯತೆಯು ಕಡಿಮೆಯಾಗುತ್ತದೆ. ಆದರೂ ಇದು ಹಲವು ಸಾಧ್ಯಗಳನ್ನು ಪಡೆದಿರುವ ಕಥೆ.’
ಇನ್ನೂ ಉಳಿದ ಎಲ್ಲ ಕಥೆಗಳ ಬಗ್ಗೆ ಹೀಗೆ ಹೇಳಲಾಗಿದ್ದರೂ ನನ್ನನ್ನು ಬಹುವಾಗಿ ಕಾಡಿ ಬರೆಸಿದ ಕಥೆಯೆಂದರೆ ’ಎರಡು ಪಾರಿವಾಳಗಳು’. ಅಬ್ಬಾ ಕಥೆಯನ್ನು ನಾನೇ ಬರೆದನೊ? ಇಲ್ಲಾ ಆ ಎರಡು ಪಾರಿವಾಳಗಳೇ ಬರೆಯಿಸಿದವೊ? ಗೊತ್ತಿಲ್ಲ. ಯುದ್ಧೋತ್ಸಾಹಿ ಮನಸ್ಸುಗಳ ಮುಂದೆ ಹಲವು ಪ್ರಶ್ನೆಗಳ ಜೊತೆಗೆ ಕಣ್ಣ ಮುಂದೆಯೇ ಮನುಷ್ಯ ಸಹಜ ಪ್ರೀತಿಯ ದಾರಿಯನ್ನು ಹುಡುಕಿವೆ ಈ ಎರಡು ಪಾರಿವಾಳಗಳು. ಹಾಗೆಯೇ ’ದೊಡ್ಡವರ ನಾಯಿ’, ’ಒಂದು ಸಹಜ ಸಾವು’ ಇವತ್ತಿನ ರಾಜಕೀಯ, ಸಾಮಾಜಿಕ ಕಲುಷಿತ ಮನಸುಗಳ ಬಗ್ಗೆ ವಿಷಾದ ಮೂಡಿಸುವ ಜೊತೆಗೆ ನಾವೆತ್ತ ಸಾಗಬೇಕು ಎಂಬ ಸೂಕ್ಷ್ಮಗ್ರಹಿಕೆಯನ್ನು ಕಥಾ ಹಿನ್ನೆಲೆಯಲ್ಲಿ ಅಂಗೈ ಗೆರೆಗಳಂತೆ ತೋರಿಸುತ್ತದೆ. ಕೊನೆಯ ಚಿಕ್ಕ ಕಥೆ ಕಥೆಗಾರನೊಂದಿಗೆ ಸುತ್ತ ಮುಸುಕಿರುವ ಕತ್ತಲೆ ನಡೆಸಿರುವ ಸಂವಾದವಿದೆ. ನನ್ನಂತವನಲ್ಲಿರಬಹುದಾದ ಹಮ್ಮು ಬಿಮ್ಮುಗಳನ್ನು ಮುಕ್ತವಾಗಿ ಕತ್ತಲೆ ಪ್ರಶ್ನಿಸಿದೆ. ಹೀಗೆ ಏನೇ ಹೇಳಿದರೂ ’ಕಥಾ ಸಂಕಲನ’ ಓದುವ, ಮುಕ್ತವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಲ್ಲದೆ ಮತ್ಯಾರಿಗಿದೆ ಹೇಳಿ? ಹಾಗೆ ನಿಮಗೆ ಅನ್ನಿಸಿದ್ದನ್ನು ನನಗೆ ನೇರವಾಗಿ ಹೇಳಿ ಇಲ್ಲಾ, ಮೇಲ್ ಮಾಡಿ. ತಪ್ಪದೇ ಓದಿ, ಮುಂದಿನ ದಿನಗಳಲ್ಲಿ ತಪ್ಪದೇ ಪಾಲಿಸುತ್ತೇನೆ. ಯಾಕೆ ಹೀಗೆಲ್ಲಾ ಹೇಳುತ್ತೇನೆ ಅಂದರೆ... ನಾನು ನಿಮ್ಮೆಲ್ಲರ ಪ್ರೀತಿ ಅಂಗೈಯಲ್ಲಿ ಅರಳಬೇಕಿದೆ. ಘಮಘಮಿಸಬೇಕಿದೆ. ಇದರೊಂದಿಗೆ ಆಮಂತ್ರಣ ಪತ್ರಿಕೆ ಅಂಟಿಸಿರುವೆ. ಸಾಧ್ಯವಿದ್ದರೆ ಬನ್ನಿ. ಬಾರದಿದ್ದರೂ ಬೇಸರವಿಲ್ಲ. ಹೇಗೆ ಸಂಪರ್ಕಿಸಿದರೂ ನಾನಂತೂ ಅತೀವ ಖುಷಿ ಅನುಭವಿಸುತ್ತೇನೆ.
ಗುಲ್ಬರ್ಗದ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ, ನಿ. ತನ್ನ ಉದ್ಘಾಟನಾ ಸಮಾರಂಭ ಮತ್ತು ಪ್ರಕಾಶನದ ಮೊದಲ ಬಾರಿಗೆ ನನ್ನ ’ಮಾಮೂಲಿ ಗಾಂಧಿ’ ಕಥಾ ಸಂಕಲನ ಸೇರಿದಂತೆ ಚಂದ್ರಕಾಂತ ಕುಸನೂರು ಅವರ ’ಸುರೇಖಾ ಮ್ಯಾಡಂ ಎಂಬ ನಾಟಕ, ಡಾ.ಪ್ರಭು ಖಾನಾಪುರೆ ಬರೆದ ’ದೃಷ್ಟಿ’ ಕವನ ಸಂಕಲನ ಮತ್ತು ಸಹ ಕಥೆಗಾರ್ತಿ ಕಾವ್ಯಶ್ರೀ ಮಹಾಗಾಂವಕರ್ ಬರೆದ ’ಬೆಳಕಿನೆಡೆಗೆ’ ಕಥಾ ಸಂಕಲನ ಬಿಡುಗಡೆಗೊಳ್ಳುತ್ತಿವೆ. ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪ ಹತ್ತಿರದ ಶ್ರೀ ರೇಣುಕಾಆರ್ಯ ಕಲ್ಯಾಣ ಮಂಟಪದಲ್ಲಿ ಪುಸ್ತಕಗಳ ಬಿಡುಗಡೆ. ಬೆಳಿಗ್ಗೆ ೧೦ಕ್ಕೆ. ತಪ್ಪದೇ ಬನ್ನಿ. ಅಂದ ಹಾಗೆ ಸಂಸದ ಕೆ.ಬಿ.ಶಾಣಪ್ಪ ಕಾರ್ಯಕ್ರಮ ಉದ್ಘಾಟಿಸಿದರೆ, ಡಾ.ಮಲ್ಲೇಪುರಂ ಜಿ.ವೆಂಕಟೇಶ ಪುಸ್ತಕಗಳನ್ನು ಬಿಡುಗಡೆಮಾಡುವರು. ಗುವಿಗು ಕುಲಪತಿ ಡಾ.ಬಿ.ಜಿ.ಮೂಲಿಮನಿ ಅಧ್ಯಕ್ಷತೆವಹಿಸುವರು. ಡಾ.ಸ್ವಾಮಿರಾವ್ ಕುಲಕರ್ಣಿ ಪುಸ್ತಕಗಳನ್ನು ಪರಿಚಯಿಸುವರು. ಕನ್ನಡನಾಡು ಲೇಖಕರ ಬಳಗದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ ಮತ್ತು ಉಪಾಧ್ಯಕ್ಷ ಡಾ.ಡಿ.ಬಿ.ನಾಯಕ ಅವರು ಸೇರಿದಂತೆ ನೀವೂ ಇರುತ್ತೀರಿ ಎಂದೇ ತಿಳಿದಿದ್ದೇನೆ.

ತಪ್ಪದೇ ಸಂಪರ್ಕಿಸಿ, ಕಥಾ ಸಂಕಲನ ಓದಿ ಬೆನ್ತಟ್ಟಿ...

ನಿಮ್ಮ ಪ್ರೀತಿಯ ಬಯಸುತ್ತಾ...

ಕಲಿಗಣನಾಥ ಗುಡದೂರು

ಸಂಪರ್ಕ
ಕಲಿಗಣನಾಥ ಗುಡದೂರು
ಇಂಗ್ಲಿಷ್ ಉಪನ್ಯಾಸಕ
ಸಂಕೇತ ಪಿ.ಯು.ಕಾಲೇಜ್,
ಸಿಂಧನೂರು-೫೮೪೧೨೮
ಜಿಲ್ಲೆ: ರಾಯಚೂರು
ಮೊ: ೯೯೧೬೦೫೧೩೨೯

ಬುಧವಾರ, ಫೆಬ್ರವರಿ 25, 2009

ಅಂತೂ...ಇಂತೂ..ಕವನಸ೦ಕಲನ ಬಂತು



ನಮ್ಮೆಲ್ಲರ ಪ್ರೀತಿಯ ಗೆಳೆಯ ಸಿದ್ದು ನ ಮೊದಲ ಕವನಸ೦ಕಲನ ಬರುತ್ತಿದೆ.ಅವನಿಗೆ ಎಲ್ಲರ ಪರವಾಗಿ ಅಭಿನ೦ದನೆಗಳು.ಆ ಸಂಕಲನಕ್ಕೆ ಜಿ.ನ್.ಮೋಹನ್ ಸರ್ ಬರೆದ ಬೆನ್ನುಡಿ ಮತ್ತು ಸೃಜನ್ ರ ಕವರ್ ಪೇಜ್ ಇಲ್ಲಿದೆ.



ಕವಿತೆಯೆಂಬ ಬೆಳಕಿನ ಬೀಜ....

ಇವು ಕತ್ತಲ ದಿನಗಳು. ಜನರನ್ನು ಕೊಂದ ಖಡ್ಗಗಳ ಮೇಲೆ ಶಾಂತಿ ಮಂತ್ರಗಳನ್ನು ಕೆತ್ತಿರುವ ದಿನಗಳು. ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿರುವ ದಿನಗಳು. ಮುಖ ಮುಖವೂ ಮುಖವಾಡವ ಹೊತ್ತು ನಿಂತ ಹಾಗಿರುವ ಕಾಲ. ಇಂತಹ ದಿನಗಳಲ್ಲಿ ಕವಿತೆಯೆಂಬ ಬೆಳಕಿನ ಬೀಜವನ್ನು ಹಿಡಿದು ನಿಂತಿರುವ ಹುಡುಗ-ಸಿದ್ಧು ದೇವರಮನಿ.

’ಕತ್ತಲ ಕೂಪದ ಮನೆಗಳೆದಿರು ನಿಂತಿರುವ, ಚಂದಿರನ ಬೆಳಕನ್ನು ಈವರೆಗೂ ಕಂಡಿಲ್ಲದ’ ಸಿದ್ಧು ಬರುವ ನಾಳೆಗಳ ಬಗ್ಗೆ ಚಿಂತಿಸುವ ಕವಿ. ಈತನ ಒಳಗಣ್ಣು ಸಂಚರಿಸುವ ದಾರಿಗಳನ್ನು ಕಂಡು ನಾನು ಬೆರಗಾಗಿದ್ದೇನೆ.

ಷರೀಫಜ್ಜನನ್ನು ಗೋರಿಯಿಂದೆಬ್ಬಿಸಿ ಯುದ್ಧ ಜಾರಿಯಲ್ಲಿರುವ ಊರಿಗೆ ಕರೆದೊಯ್ಯುವ ಛಾತಿ ಈ ಹುಡುಗನಿಗಿದೆ. ಯುದ್ಧವೇ ಕೊನೆಯ ನಿರ್ಧಾರ ಎನ್ನುವವರನ್ನು ಮನುಷ್ಯರನ್ನಾಗಿಸುವ ಕೆಲಸ ನನ್ನದು ಎಂದು ಈತ ಭಾವಿಸಿದ್ದಾನೆ. ಮನೆ ಮನೆಗೂ ಬಣ್ಣ ಬಳಿಯುವ ಪೇಂಟರ್‌ಗೇ, ಬದುಕು ಬಣ್ಣ ಬಳಿಯುತ್ತಾ ಕುಳಿತಿರುವುದು ಈತನಿಗೆ ಮಾತ್ರ ಕಾಣುತ್ತದೆ.

ಸಿದ್ಧು, ಕತ್ತಲ ದಾರಿಗಳಲ್ಲಿ ನಡೆಯುತ್ತಾ ಕಳೆದು ಹೋಗುವವನಲ್ಲ ಈತ ಕತ್ತಲ ಮಧ್ಯೆ ಬೆಳಕಿಗಾಗಿ ಹೊರಟ ಪಯಣಿಗ.
ಕವಿತೆಯೆಂಬ ಬುಡ್ಡಿದೀಪ ತನ್ನ ಸುತ್ತಲಿನ ಕತ್ತಲನ್ನು ಒಂದಿಷ್ಟು ಕಾಲವಾದರೂ ಇಲ್ಲವಾಗಿಸುತ್ತದೆ ಎಂಬ ಭರವಸೆ ಹೊತ್ತ ಹುಡುಗ.

"ನನಗೀಗ ಬೆಳಕಿನದೇ ಧ್ಯಾನ...
ಕಟ್ಟಿಕೊಳ್ಳಬಹುದಾದ ’ಆಕಾಶ ಬುಟ್ಟಿ’ಗೆ
ಆರದ ಬೆಳಕನ್ನು ಹುಡುಕುತ್ತಿದ್ದೇನೆ.

ನಾನೂ ಬೆಳಕಾಗಬೇಕು"

ಎನ್ನುವ ಸಿದ್ಧು, ಬರುವ ನಾಳೆಗಳಿಗೆ... ಉಸಿರು ಹಚ್ಚುವ ಕವಿ.

-ಜಿ. ಎನ್. ಮೋಹನ್

ಸೋಮವಾರ, ಫೆಬ್ರವರಿ 23, 2009

ಆಯ್ಕೆ ಎಂಬುದು ಈರುಳ್ಳಿ ದೋಸೆಯಲ್ಲ



(ಜಿ.ಎನ್.ಮೋಹನ್ ಸರ್ ರವರ ‘ಪ್ರಶ್ನೆಗಳಿರುವುದು ಷೇಕ್ಸಪಿಯರನಿಗೆ’ ಕವನಸಂಕಲನದ ಒಂದು ಚಂದದ ಕವಿತೆ)

ಈರುಳ್ಳಿ ದೋಸೆ ತಿನ್ನುವುದು
ಅಂತಹ ಕಷ್ಟದ ಕೆಲಸವೇನಲ್ಲ
ತಟ್ಟೆಯ ಮೇಲೆ ಸ್ವಚ್ಛಂದ
ಹರಡಿಕೊಡಿರುವ ದೋಸೆ
ತಿನ್ನಲು ಏನಿದೆ ಕಷ್ಟ
ದೋಸೆಗೆ ನೆನೆಹಾಕಬೇಕು
ಚೆನ್ನಾಗಿ ರುಬ್ಬಬೇಕು
ಕಣ್ಣೀರು ಸುರಿಯುತ್ತಿದ್ದರೂ ಬಿಡದೆ
ಈರುಳ್ಳಿ ಕತ್ತರಿಸಬೇಕು
ಕತ್ತರಿಸಿದ್ದು ಮಟ್ಟಸವಾಗಿರಬೇಕು.
ಕೈಗೆ ಖಾರ ಹತ್ತಿದರೂ ಮೆಣಸಿನಕಾಯಿಯ
ಬೆನ್ನಟ್ಟಬೇಕು ಹೊಟ್ಟೆ ಸಿಗಿಯಬೇಕು
ಎಲ್ಲಾ ಚೆನ್ನಾಗಿ ಬೆರಸಿ ಕಾವಲಿಯ
ಶಾಸ್ತ್ರ ಗೊತ್ತು ಮಾಡಿಕೊಂಡು ಹುಂ
ಈರುಳ್ಳಿ ದೋಸೆ ಮಾಡಬೇಕು.

ಆದರೆ ತಿನ್ನಲ್ಲೇನು ಕಷ್ಟ
ಬೇಕಿದ್ದರೆ ಕೈಯಲ್ಲಿ ಇಲ್ಲದಿದ್ದರೆ
ಸ್ಪೂನು ಫೋರ್ಕಲ್ಲಿ ಚೆಂದ ಮಾತಾಡುತ್ತಾ
ಸ್ಪೂನನ್ನು ಎಡಗೈಯಲ್ಲೋ ಇಲ್ಲಾ
ಬಲಗೈಯಲ್ಲೋ ಹೇಗೋ ಹಿಡಿದು
ಮುರಿದು ಬಾಯಿ ತೆಗೆದು
ಒಳಗಿಟ್ಟರೆ ಆಯಿತು ಉಳಿದದ್ದು
ಹಲ್ಲು ನಾಲಗೆಯ ಕೆಲಸ.

ಆದರೆ ಆಯ್ಕೆ ಎಂಬುದಿದೆಯಲ್ಲ
ಅದು ಈರುಳ್ಳಿ ದೋಸೆಯಲ್ಲ
ಕವಲು ದಾರಿಯಲ್ಲಿ ನಿಂತು
ಬೇಕಾದ ದಾರಿ ಹಿಡಿಯುವುದು
ಈರುಳ್ಳಿ ದೋಸೆ ತಿಂದಷ್ಟು ಸುಲಭವಲ್ಲ.
ದಾರಿಗಳನ್ನು ಆಯ್ಕೆ ಮಾಡಿಕೊಳ್ಳಲು
ನಿಂತವರಿಗೆ ದೋಸೆ ತಿನ್ನುವುದಕ್ಕಿಂತ
ದೋಸೆ ಮಾಡುವ ಕಷ್ಟ ಗೊತ್ತಿರಬೇಕು
ಕೈಗೆ ಮೆಣಸಿನಕಾಯಿ ಮೆತ್ತಿಕೊಂಡರೂ
ಖಾರವಾಗದಂತಿರಬೇಕು. ಈರುಳ್ಳಿ
ಹಚ್ಚಬೇಕು ಆದರೆ ಕಣ್ಣೀರು
ಸುರಿಸದಂತಿರಬೇಕು

-ಜಿ.ಎನ್.ಮೋಹನ್

ಗುರುವಾರ, ಫೆಬ್ರವರಿ 19, 2009

ಕವಿ ಕಾಲಂ




(ರಾಯಚೂರಿನ ಆತ್ಮೀಯ ಸ್ನೇಹಿತ ಶಿವರಾಜ್ ಬೆಟ್ಟದೂರು ಇವರ ಮಯೂರದಲ್ಲಿ ಪ್ರಕಟವಾದ ಒಂದು ಚಂದದ ಕವಿತೆ)

ಈ ಅಪ್ಪ ಈ ಅಮ್ಮ

ಈ ಅಮ್ಮ
ನನ್ನ ಹಡೆದು
ಸಾವ ಅಂಚಲ್ಲಿ ಕೊಂಚ ನಿಂತು
ಅವತ್ತೇ ರಟ್ಟೆ ಬೀಸಿ ರೊಟ್ಟಿ ಬಡಿದಳು

ನಮ್ಮಮ್ಮ
ಮಲ್ಲಿಗೆ ಮುಖದ
ಅದನೆ೦ದೂ ಮುಡಿಯದ ಓನಾಮ
ಓದಲು ಆಕೆಗೆ ಅಕ್ಷರ ಬೇಡ
ಕಪ್ಪು ಬಿಳುಪಿನ ಮಕ್ಕಳ ಮೈ ಸಾಕು
ಮಾಡಲು ಆಕೆಗೆ ನೂರೆಂಟು ಕೆಲಸ
ಆಳು ಕಾಳು ಎಮ್ಮೆ ಮನೆ ಮಕ್ಕಳು

ಚೀರುವ ಮಗುವಿನ ಕುಂಡೆ ತೊಳೆದು
ಅದೇ ಕೈಯಲಿ ರೊಟ್ಟಿಯ ಬಡಿವಳು
ಒಬ್ಬೆಯ ಮೇಲೊಬ್ಬೆ
ಮೌನದ ತುತ್ತಿಗೆ ಯಾವ ಲೆಕ್ಕ?

ಅಮ್ಮನ ಮೇಲೆ ಹಾಡು ಕಟ್ಟಿ
ಕತೆ ಹೇಳಿವೆ ಪದಗಳು ಒಂದಿಲ್ಲೊಂದು

ಅಮ್ಮ ಮಗುವಿನ ತಾಯಿಯಂತೆ
ತಂದೆಗೆ ಮಡದಿಯೆಂತೆಲ್ಲ ಇದ್ದರೆ
ಈ ಜನ
ಅಮ್ಮನನ್ನು ನೆನಪು ಮಾಡುತ್ತಿರಲಿಲ್ಲ

ಅಪ್ಪನ ಮದುವೆಯಾದ ಅವಳ
ಗೊತ್ತೇ ಆಗದಂತೆ
ತಪ್ಪು ಮಾಡಿದ ತಪ್ಪಿಗೆ
ಅಮ್ಮನೂ ಕಾರಣವಿರಬೇಕು
ನಾನಿರುತ್ತಿರಲಿಲ್ಲ

ಹಾಲು ಹೈನ ಮಾಡುವ ಅಮ್ಮ
ಅಪ್ಪನನ್ನು ಹಾಲಲ್ಲಿ ಅದ್ದಿ
ಮೈ ತೊಳೆದಳು

ಅಪ್ಪನೂ ಅಷ್ಟೆ; ಪ್ರೀತಿ ಉಣಬಡಿಸಿದ
ಅನ್ಯೋನ್ಯವಾಗಿರುವಾಗಲೆ
ಯಾಕೋ ಏನೋ ಚೀರುವಳು ಅಮ್ಮ
ಒಮ್ಮೊಮ್ಮೆ ರಂಪ, ಹಲವು ಸಲ ಅನುಕಂಪ

ಇಲ್ಲ ಅಂದು ಕೇಳಲಿಲ್ಲ, ಇದೆ ಎಂದೂ ಅನ್ನಲಿಲ್ಲ
ಊರ ಉಸಾಬರಿ ಮಾಡಲಿಲ್ಲ; ಅಗಸೆ ದಾಟಲಿಲ್ಲ
ಯಾರ ಮಣ್ಣಿಗೂ ಹೋಗುವದು ಬಿಡಲಿಲ್ಲ
ಕಚ್ಚೆ ಏರಿಸಿ ಗಂಡ್ರಾಮಿಯಾಗಿ ದುಡಿದಳು
ಗಂಡಸು ಎತ್ತದಷ್ಟು ಮೇವು ಹೊರೆ ಹೊತ್ತಳು
ಕಂದ ಹಾಕಿದ ಎಮ್ಮೆಗೆ ಮುಖ ಗಂಟಿಕ್ಕಿದಳು
ಬೇಸಿಗೆಯಲ್ಲಿ ಖುಲ್ಲಾ ಹೊಡೆದು ಊರೂರು
ಅಲೆದು
ಮುಸಿಮುಸಿ ಅತ್ತಳು;ಎಲ್ಲಾ ಎಮ್ಮೆಗೆ
ಗಾಂಧಿ ಮನೆತನದ ಹೆಸರೇ ಇಟ್ಟಳು

ಅಪ್ಪ ನಿಜವಾಗಲೂ ಅಮ್ಮನನ್ನು
ತುಂಬಾ ಪ್ರೀತಿಸುವವ
ಇದು ಹೀಗೆಂದು ಒಂದು
ಮುಂಜಾವು ನನಗೆ ಗೊತ್ತಾಯಿತು
ಅಮ್ಮನೇನೂ ಕಡಿಮೆ ಇರಲಿಲ್ಲ!

ಅವರ ರಾತ್ರಿಗಳು ಮೌನ ರಾಗಗಳಾಗಿ
ಬೆಳಿಗ್ಗೆ ನನಗೆ ಅಪ್ಪನಿಗೆ
ಉಣಬಡಿಸುವಾಗಲೆ ಗೊತ್ತಾಗುತ್ತಿತ್ತು

ಅಪ್ಪನ ಮೈಸೂರು ಸ್ಯಾಂಡಲ್ಲು
ಅಮ್ಮನ ಬರಿ ಮೈ ಸ್ನಾನ
ನನ್ನಲ್ಲಿ ಗಾಢವಾದ ಮೌನ, ಅಕ್ಕರೆ,ಸಂಶಯ

ಈ ಅಪ್ಪ ಈ ಅಮ್ಮ
ಎಲ್ಲಿ ಹೋದರು
ಗೊತ್ತಾಗುತ್ತಿಲ್ಲ.

-ಶಿವರಾಜ ಬೆಟ್ಟದೂರು, ರಾಯಚೂರು

ಶನಿವಾರ, ಫೆಬ್ರವರಿ 14, 2009

ಕಲಾಲ್ ಕಾಲ೦







ವಾಲಂಟೈನ್ಸ್ ಡೇ ಎಂಬ ರಾಮಾಯಣ



ಮಾಯದ ಜಿಂಕೆಯ ಬೆನ್ನತ್ತಿ ಹೋದ ರಾಮ ಸೀತೆಯನ್ನು ಕಳೆದು ಕೊಂಡು ಬಿಟ್ಟ. ಅತ್ತ ಜಿಂಕೆಯೂ ಇಲ್ಲ, ಇತ್ತ ಸೀತೆಯೂ ಇಲ್ಲ. ಸೀತೆಗೆ ಈ ಮಾಯದ ಜಿಂಕೆ ಕಾಣಿಸಿಕೊಂಡು ಪ್ರಲೋಭ ಒಡ್ಡಿರುವ ಬಗ್ಗೆ ರಾಮನಿಗೆ ಅತ್ಯಂತ ಖೇದವಾಗಿತ್ತು.
ಸೀತೆ ಕೆಲವು ಸುಳಿವುಗಳನ್ನು ಬಿಟ್ಟು ಹೋಗಿದ್ದರಿಂದ ಅವಳು ಲಂಕಾ ಪಟ್ಟಣದಲ್ಲಿ ರಾವಣನ ಸೆರೆಯಲ್ಲಿದ್ದಾಳೆ ಎಂದು ರಾಮ ಗೊತ್ತು ಮಾಡಿಕೊಂಡ.
ಹೊಸದಾಗಿ ಶಿಷ್ಯನಾಗಿದ್ದ ಹನುಮನಿಗೆ ಸೀತೆಯ ಮಾಹಿತಿ ತರಲು ಕಳಿಸಿಕೊಟ್ಟು ಕಾಯುತ್ತಾ ಕುಳಿತ.
ವಾಯುಪುತ್ರ ಹನುಮ ಆಕಾಶ ಮಾರ್ಗದಲ್ಲಿ ಸಂಚರಿಸುವಾಗ ಆತನಿಗೆ ದಾರಿಯೂದ್ದಕ್ಕೂ ಮಿಸ್ ಆದ ಎಸ್.ಎಂ.ಎಸ್.ಗಳು, ವಿವಿಧ ಚಾನೆಲ್‌ಗಳ ಅಂತರಾತ್ಮಗಳು, ದಾರಿ ತಪ್ಪಿಸಿಕೊಂಡ ಈಮೇಲ್‌ಗಳು ಢಿಕ್ಕಿ ಹೊಡೆದು ಮಾಹಿತಿ ತಂತ್ರಜ್ಞಾನದ ಯುಗಕ್ಕೆ ಕರೆದುಕೊಂಡು ಹೋದವು. ತಕ್ಷಣವೇ ನಮ್ಮ ಹನುಮ ಮಿಸ್ಟರ್ ಹನುಮಂತ್ ಆಗಿ ಬಿಟ್ಟ. ಐಟಿ, ಬಿಟಿ ಲೋಕದಲ್ಲಿ ಹರಡಿ ರಾಮ-ಸೀತೆ, ರಾವಣನ ಲೋಕವೆಲ್ಲಾ ಸಿಲಿಕಾನ್ ಸಿಟಿಯಾಗಿ ಬಿಟ್ಟಿತು.
ಅಂತೂ ಕೊನೆಗೆ ಸೀತೆ, ರಾಮ ಇಬ್ಬರು ಸಂಧಿಸುವಲ್ಲಿ ಮಿಸ್ಟರ್ ಹನುಮಂತ ಯಶಸ್ವಿಯಾಗಿ ಬಿಟ್ಟ.
ಅದೊಂದು ದಿನ ಸೀತೆಯೊಂದಿಗೆ ಮಿಸ್ಟರ್ ಹನುಮಂತ್ ಬ್ರಿಗೇಡ್ ರಸ್ತೆಯಲ್ಲಿ ರಾಮನ ದಾರಿ ಕಾಯುತ್ತಾ ನಿಂತರು.
ಈ ನಡುವೆ ರಾಮನಿಗೆ ಎಲ್ಲಾ ವರ್ತಮಾನ ಈ ಮೇಲ್ ಮೂಲಕ ಗೊತ್ತಾಗಿ, ಎಸ್.ಎಂ.ಎಸ್.ದಾರಿ ಕಾಯುತ್ತಾ ರಿಲ್ಯಾಕ್ಸ್ ಆಗಿ ಪಬ್‌ಗೆ ನುಗ್ಗಿ ಒಂಚೂರು ಬಂಗಾರದ ದ್ರವದಿಂದ ನಾಲಿಗೆ ತೇವ ಮಾಡಿಕೊಂಡ. ಪಬ್‌ನಲ್ಲಿ ಹುಡುಗ-ಹುಡುಗಿಯರು ಡ್ಯಾನ್ಸ್ ಮಾಡೋವುದನ್ನು ನೋಡಿ, ತಾನು ಇಂತಹ ಪಬ್ ಒಂದರಲ್ಲಿಯೇ ಸೀತೆಯನ್ನು ಭೇಟಿಯಾಗಿದ್ದು, ಭೇಟಿ ನಂತರ ಪ್ರೀತಿಗೆ ಹೊರಳಿದ್ದು, ಅವಳು ತನ್ನ ಕಷ್ಟವನ್ನು, ಇವನು ತನ್ನ ಕಷ್ಟವನ್ನು ಹಂಚಿಕೊಂಡಿದ್ದು, ಇಬ್ಬರೂ ಬಾಳು ಹಂಚಿಕೊಳ್ಳಲು ನಿರ್ಧರಿಸಿ ಮದುವೆಯಾಗಿದ್ದು. ಎಲ್ಲವೂ ಕನ್ನಡ ಸಿರಿಯಲ್‌ಗಳಂತೆ ನೆನಪಾದವು. ಅದೊಂದು ರಾಮಾಯಣವೇ? ಈ ಬಗ್ಗೆ ಜೋಗಿ, ವಸುಧೇಂದ್ರ, ಚೇತನಾ ಮುಂತಾದವರಿಗೆ ಕಥೆ ಬರೆಯಲು ಬಿಟ್ಟು ಬಿಡೋಣ. ನಮಗೇಕೆ ಈ ಉಸಾಬರಿ. ನಮ್ಮ ಕಥಾ ನಾಯಕ ರಾಮ ಪಬ್‌ನಲ್ಲಿ ಮೂರು ಪೆಗ್ ಹಾಕಿದಾಗ ಅಮೇರಿಕಾ ಎಂಬುದೆ ಈ ಮಾಯಾ ಜಿಂಕೆ ಎಂಬ ರೂಪಕದ ಭಾಷೆಯಲ್ಲಿ ಏನೋನು ಬುದ್ಧಿಜೀವಿ ಕವಿಯಂತೆ ತನಗೆ ತಾನೇ ಮಾತನಾಡಿಕೊಂಡ. ಅಷ್ಟರಲ್ಲಿ ಬೀಪ್ ಶಬ್ದ ನಾನು ಇನ್ನೂ ಜೀವಂತ ಇದ್ದೀನಿ ಎಂದು ಮೊಬೈಲ್ ನೆನಪು ಮಾಡಿತು.
ತಡಮಾಡದೇ ನಮ್ಮ ರಾಮ ಬ್ರಿಗೇಡ್ ರಸ್ತೆಗೆ ಬೈಕ್ ಓಡಿಸಿದ. ಸೀತೆ ಗುಲಾಬಿ ಹೂವು ಕೈಯಲ್ಲಿ ಹಿಡಿದು ’ಐ ಲವ್ ಯುವ್’ ಎನ್ನುವಂತೆ ನಿಂತಿದ್ದಳು. ರಾಮ ಹೂವು ತೆಗೆದುಕೊಂಡಾಗ ಇಬ್ಬರ ಕಣ್ಣುಗಳಲ್ಲಿ ಕಂಬನಿಯೂ, ಆನಂದಭಾಷ್ಪವೋ ಅಂತೂ ಇಬ್ಬರೂ ಒಬ್ಬರನ್ನೊಬ್ಬರು ಸಿನಿಮಾ ನಾಯಕ=ನಾಯಕಿಯಂತೆ ಬಿಗಿದಪ್ಪಿಕೊಳ್ಳಬೇಕು ಎಂದು ಕೊಂಡಿರುವಾಗ, ಇಂತಹ ಸನ್ನಿವೇಶವನ್ನೇ ಕಾಯುತ್ತ ಪುಳುಕಿತನಾಗಲು ಮಿಸ್ಟರ್ ಹನುಮಂತ್ ಸಿದ್ಧನಾಗಿರುವಾಗ ವಾನರ ಸೇನೆಯೊಂದು ಧಾಳಿ ನಡೆಸಿ ಬಿಟ್ಟಿತು.
’ಭಾರತೀಯ ಸಂಸ್ಕೃತಿ ಉಳಿಸಿ’ ’ವಾಲಂಟೈನ್ಸ್ ಡೇಗೆ ಧಿಕ್ಕಾರ’ ಘೋಷಣೆಗಳು. ಒಂದು ಕೈಯಲ್ಲಿ ರಾಖಿ ಮತ್ತೊಂದು ಕೈಯಲ್ಲಿ ಕರೀಮಣಿ ಸರ ಹಿಡಿದುಕೊಂಡಿದ್ದ ಗಡುವನೊಬ್ಬ ರಾಮನಿಗೆ ಒಂದೇಟು ಕೊಟ್ಟವನೇ ಯಾವದು ಬೇಕು ಎಂಬಂತೆ ಎರಡನ್ನೂ ಮುಖದ ಮುಂದೆ ಆಡಿಸಿದ. ಈ ನಡುವೆ ಸೀತೆಯನ್ನು ಎಳೆದಾಡುತ್ತಾ ಹಲ್ಲೆ ನಡೆಸಿ ಭಾರತೀಯ ಸಂಸ್ಕೃತಿ ಉಪದೇಶ ನೀಡಿದ ವಾನರರು ಅಡ್ಡ ಬಂದ ಮಿಸ್ಟರ್ ಹನುಮಂತ್‌ನಿಗೆ ಬ್ರೋಕರ್ ನನ್ನ ಮಗನೇ ಎಂದೇ ಒಬ್ಬರಮೇಲೊಬ್ಬರು ಲಾಥು ಹಾಕಿ, ನೆಲಕ್ಕೆ ಕೆಡವಿದ್ದರು. ರಾಮ ಸೀತೆಗೆ ತಾಳಿ ಕಟ್ಟಿದನೇ? ಅಥವಾ ರಾಖಿ ಕಟ್ಟಿದನೋ? ನಮ್ಮ ಪೊಲಂಕಿ ಬದುಕಿದ್ದರೆ ಇನ್ನೊಂದು ಪೊಲಂಕಿಯಾಣ ಬರೆದು ಬಿಡುತ್ತಿದ್ದರು. ಹೀಗೆ ’ವಾಲಂಟೈನ್ಸ್ ಡೇ ರಾಮಾಯಣ’ ಎಂಬ ದಕ್ಷಿಣ ಕಾಂಡ ಆರಂಭವಾಯಿತು.

- ಪರಶುರಾಮ ಕಲಾಲ್
February 14, 2009 12:13 AM

ಶುಕ್ರವಾರ, ಫೆಬ್ರವರಿ 6, 2009

ಪ್ರೀತಿಯನ್ನು ಪ್ರೀತಿಸುತ್ತಾ....



ನಮ್ಮ ಬ್ಲಾಗ್‌ನಲ್ಲಿ ಪರಶುರಾಮ ಕಲಾಲ್ ಅವರು ಇನ್ನು ಮುಂದೆ ತಮ್ಮ ಲೇಖನಗಳನ್ನು ’ಕಲಾಲ್ ಕಾಲಂ’ನಲ್ಲಿ ಬರೆಯಲಿದ್ದಾರೆ. ಪ್ರಸ್ತುತ ಘಟನೆಗಳ ಬಗ್ಗೆ ಸೂಕ್ಷ್ಮವಾದ ಮತ್ತು ನೀವೆಲ್ಲರೂ ಇಷ್ಟಪಡುಬಹುದಾದ ಲೇಖನಗಳನ್ನು ಈ ಕಾಲಂನಲ್ಲಿ ನಿರೀಕ್ಷಿಸಬಹುದು.

- ನಿರಂಜನ ಕೊಟ್ಟೂರು.


ಪ್ರೀತಿಸುವುದು ತಪ್ಪೇ? ಪ್ರೀತಿ ಎಂದರೆ ಏನು? ಒಂದು ಹುಡುಗ-ಹುಡುಗಿಯ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿದರೆ ಇದರಲ್ಲಿ ತಪ್ಪೇನು? ಇವರ ಮದುವೆಗೆ ಜಾತಿ-ಮತ, ಅಂತಸ್ತುಗಳು ಅಡ್ಡಬಂದರೆ ಅದನ್ನು ಮೀರುವಂತೆ ನೋಡಿಕೊಳ್ಳುವುದು ನಾಗರಿಕ ಸಮಾಜದ ಕರ್ತವ್ಯವಲ್ಲವೇ? ಅದನ್ನು ವಿರೋಧಿಸಿದರೆ ಅದೆಂತಹ ನಾಗರಿಕ ಸಮಾಜ?
’ಪ್ರೀತಿ ಅಂದರೆ ಅದೊಂದು ಉತ್ಪಾದನಾ ವಸ್ತುವಿನ ಅಭಿವ್ಯಕ್ತಿ ಇದ್ದಂತೆ
ಅದಕ್ಕೆ ಹೊಣೆಗಾರಿಕೆ, ಜವಾಬ್ದಾರಿ ಎಂಬೆಲ್ಲಾ ಅಮೂಲ್ಯ ಅರ್ಥಗಳಿವೆ’ ಎನ್ನುತ್ತಾನೆ ಮಾನವ ಶಾಸ್ತ್ರಜ್ಞ ಎರಿಕ್ ಫ್ರಾಮ್.
ಜಾಗತೀಕರಣದಲ್ಲಿ ಸಿಲುಕಿರುವ ನಾವುಗಳ ಎಲ್ಲವನ್ನೂ ವಾಣಿಜ್ಯಭಾಷೆಯಲ್ಲಿ ಅರ್ಥೈಸಿಕೊಳ್ಳುತ್ತಿರುವಾಗ ಮಾನವೀಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಮನುಷ್ಯ, ಮನುಷ್ಯರ ನಡುವೆ ದೊಡ್ಡ ಕಂದಕ ಉಂಟಾಗುತ್ತದೆ. ಸುಖ ಎನ್ನುವುದು ಹಣದಿಂದ ಕೊಂಡು ಕೊಳ್ಳುವ ’ಸರಕಾಗಿ’ ಮಾರ್ಪಾಡುತ್ತದೆ. ಇಂತಹ ಸಂದರ್ಭದಲ್ಲಿ ಪಾಪ ಒಂದು ಎಳೆಯ ಪ್ರೀತಿ ಬದುಕುವುದುಂಟೆ? ಪ್ರೀತಿ ಉಸಿರುಗಟ್ಟಿ ಅತ್ತ ಸಾಯದೆ, ಇತ್ತ ಬದುಕದೆ ಏದುಸಿರು ಬಿಡುತ್ತಾ ’ಪಂಜರದ ಗಿಳಿ’ಯಾಗಿ ಅರ್ತನಾದ ಮಾಡುತ್ತದೆ. ಶಬ್ದಮಾಲಿನ್ಯದಲ್ಲಿ ಸಿಲುಕಿದವರಿಗೆ ಈ ಧ್ವನಿ ಕೇಳುಸುತ್ತಲೇ ಇಲ್ಲ.
ಇಂತಹ ಸಮಾಜದಲ್ಲಿ ಒಂದು ಹುಡುಗ-ಹುಡುಗಿ ಪ್ರೀತಿಸುವುದು ದೊಡ್ಡ ಅಪರಾಧವಾಗಿ ಕಂಡು, ಅದನ್ನು ’ಸ್ವೆಚ್ಛಾಚಾರ’ ಎಂದೇ ಬಣ್ಣಿಸುವ ವಾತಾವರಣ ಸೃಷ್ಠಿಯಾಗಿ ಬಿಡುತ್ತದೆ.
ಇದರ ತಾರಕರೂಪವೇ ಅನ್ಯ ಧರ್ಮಿಯರ ಒಂದು ಹುಡುಗ-ಹುಡುಗಿ ಪರಸ್ಪರ ಸ್ನೇಹ ಬೆಳೆಸುವುದು ’ಅಸಭ್ಯ’ ಎನ್ನುವ ಮನಸ್ಥಿತಿಗೆ ಕಾರಣವಾಗುತ್ತದೆ.
ಕರಾವಳಿಯಲ್ಲಿ ಇವತ್ತು ನಡೆಯುತ್ತಿರುವುದು ಇದೇ.
ಪ್ರೀತಿಯನ್ನು ಸ್ವೇಚ್ಛಾಚಾರ, ಸ್ನೇಹವನ್ನು ಅಸಭ್ಯ ಎಂದು ಬಗೆಯುವ ಮಂದಿ ಅದರ ರಕ್ಷಣೆಗಾಗಿ ಸೇನೆ ಕಟ್ಟಿಕೊಂಡು ಅಂತವರನ್ನು ಹಿಡಿದು ’ಬುದ್ಧಿ ಕಲಿಸುತ್ತಾರೆ, ’ ’ಸಂಸ್ಕೃತಿಯ ಪಾಠ’ ಹೇಳಿಕೊಡುತ್ತಾರೆ, ಪ್ರೀತಿಸುವುದು ಗೊತ್ತಿಲ್ಲದ ಜನ.
ಜಗತ್ತಿನ ಬೇರೆ ಯಾವುದೇ ಭಾಷೆಗಳಲ್ಲಿ ಬರದಷ್ಟು ಪ್ರೀತಿ-ಪ್ರೇಮದ ಕಥಾವಸ್ತು ಹೊಂದಿದ ಚಲನಚಿತ್ರಗಳು ಭಾರತದಲ್ಲಿ ಬಂದಿವೆ. ಈಗಲೂ ಬರುತ್ತಿವೆ. ’ಪರಸ್ಪರ ಪ್ರೇಮಿಸುವ ಹೃದಯಗಳು, ಇವರಿಬ್ಬರೂ ನಾಯಕ-ನಾಯಕಿಯರು, ಅವರನ್ನು ಬೇರ್ಪಡಿಸಲು ಯತ್ನಿಸುವವರು ಅವರೆಲ್ಲಾ ಖಳನಾಯಕರು’ ಇದೇರೀತಿಯ ಅಸಂಖ್ಯಾತ ಚರ್ವಿತಚರ್ವಿಣ ಕಥೆಗಳು.
ಪ್ರೀತಿಸಲಾಗದ ಸಮಾಜವೊಂದರಲ್ಲಿ ಪ್ರೀತಿಸುವ ಕನಸು ಯಾವತ್ತೂ ಆಶಯವಾಗಿಯೇ ಉಳಿದಿರುವುದರಿಂದ ಇಂತಹ ಕಥಾ ಚಿತ್ರಗಳು ಯಾವತ್ತಿಗೂ ಇಲ್ಲಿ ಜೀವಂತ ಇರುತ್ತವೆ. ಇದನ್ನೇ ನಮ್ಮ ಸಿನಿಮಾಗಳು ಬಂಡವಾಳ ಮಾಡಿಕೊಂಡಿವೆ.
ಪ್ರೀತಿಸಲು ಸಾಧ್ಯವಾಗದ ಸಮಾಜದಲ್ಲಿ ಕಾಮ ಮಾತ್ರ ಹುಚ್ಚೆದ್ದು ಕುಣಿಯುತ್ತದೆ. ಇಂತಹ ಹುಚ್ಚೆ ದೇವದಾಸಿ ಪದ್ಧತಿಯನ್ನು ಇನ್ನೂ ಜೀವಂತವಾಗಿಟ್ಟಿದೆ. ಏಷ್ಯಾ ಖಂಡದಲ್ಲಿಯೇ ಭಾರತದಲ್ಲಿರುವಷ್ಟು ಕೆಂಪು ದೀಪಗಳ ಏರಿಯಾಗಳು ಬೇರೆಲ್ಲೂ ಇಲ್ಲ. ಪ್ರತಿನಿಮಿಷಕ್ಕೊಮ್ಮೆ ಆಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ನಡೆಯುತ್ತಲೆ ಇದೆ. ಇವೆಲ್ಲಾ ಬಂಧಿಸಿರುವ ಸಂಕೋಲೆಗಳನ್ನು ಮುರಿಯಲು ಕಂಡು ಕೊಂಡ ಅಡ್ಡಮಾರ್ಗಗಳು ಅಥವಾ ಅಡ್ಡ ಪರಿಣಾಮಗಳು.
ನಮ್ಮ ಪುರಾಣದ ಅನೇಕ ಕಥಾನಾಯಕರು ಅಂತರ್ಜಾತಿಯ ವಿವಾಹವಾಗಿದ್ದಾರೆ. ವಿವಾಹದಲ್ಲೂ ಗಂಧರ್ವ ವಿವಾಹ ಸೇರಿದಂತೆ ಅನೇಕ ಬಗೆಯ ವಿವಾಹಗಳು ಇವೆ. ಋಷಿಪುಂಗವರಂತೂ ತಮ್ಮ ತಪಸ್ಸನ್ನು ರಂಭಾ, ಊರ್ವಶಿ, ಮೇನಕೆಯರು ಬಂದು ಕೆಡಸಬೇಕೆಂದೆ ತಪಸ್ಸಿಗೆ ಕುಳಿತಿದ್ದಾರೆ ಎಂದು ಭಾವಿಸುವಷ್ಟು ರಂಜಕ ಕಥೆಗಳಿವೆ.
ವ್ಯಾಲೆಂಟೈನ್ ಡೇ ನಮ್ಮ ಸಂಸ್ಕೃತಿ ಅಲ್ಲ, ವಾದಕ್ಕಾದರೂ ಒಪ್ಪಿಕೊಳ್ಳೋಣ. ನಮ್ಮ ಸಂಸ್ಕೃತಿ ಯಾವುದು? ಭಾರತೀಯ ಸಂಸ್ಕೃತಿ ಎನ್ನುವಂತಾದ್ದು ಏನಾದರೂ ಇದೆಯೇ? ಬರ್ತಡೇ ಆಚರಿಸುವುದು ಯಾವ ಸಂಸ್ಕೃತಿ? ಪ್ಯಾಂಟ್, ಷರ್ಟು ಹಾಕಿಕೊಳ್ಳುವುದು ಯಾವ ಸಂಸ್ಕೃತಿ? ಸಂಸ್ಕೃತಿ ಎನ್ನುವುದು ಹರಿಯುವ ನೀರಿನಂತೆ ಹೊಸದನ್ನು ಸ್ವೀಕರಿಸುತ್ತಲೇ ಹೋಗುವ ಪರಿಯದು. ಒಂದು ಸಂಸ್ಕೃತಿ ಹೊರಗಿನದನ್ನು ಸ್ವೀಕರಿಸಿದರೆ ಅದು ಸಾಯುತ್ತದೆ ಎನ್ನುವುದಾದರೆ ನಾನು ಅದು ಸತ್ತು ಹೋಗಲಿ ಎಂದೇ ಹೇಳುತ್ತೇನೆ. ಅಷ್ಟೊಂದು ಪೊಳ್ಳಾದ, ಶಕ್ತಿಹೀನ ಸಂಸ್ಕೃತಿ ನಮಗೆ ಬೇಕಿಲ್ಲ.
ಐದುಸಾವಿರ ವರ್ಷದ ಇತಿಹಾಸವಿರುವ ದೇಶ ಭಾರತ. ಇಲ್ಲಿ ಸಂಸ್ಕೃತಿ, ಪರಂಪರೆ ಬೆಳೆದಿರುವುದು ಕೊಡುಕೊಳ್ಳುವಿಕೆಯ ಮೂಲಕವೇ. ಇದನ್ನು ಅರ್ಥ ಮಾಡಿಕೊಂಡರೆ ಮಾತ್ರ ನಾವು ಸಂಸ್ಕೃತಿಯನ್ನು ನಿಜವಾದ ಅರ್ಥದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ. ಅಂತಹ ಜನಪರ ಸಂಸ್ಕೃತಿಯೊಂದರ ವಾರುಸುದಾರರಾದ ನಾವುಗಳು ಒಂದು ವ್ಯಾಲೆಂಟೈನ್ ಡೇಗೆ ಹೆದರುವ ಅಗತ್ಯವಿಲ್ಲ.
’ಪ್ರೀತಿಯೇ ನಿನ್ನನ್ನು ನಾನು ಪ್ರೀತಿಸುತ್ತೇನೆ. ಪ್ರೀತಿಸುತ್ತಲೇ ಹೋಗುತ್ತೇನೆ. ಪ್ರೀತಿಯೇ ನನಗೆ ಗಾಢ ನಂಬಿಕೆ ನೀಡು, ಜವಾಬ್ದಾರಿ, ಹೊಣೆಗಾರಿಕೆ ಹೆಚ್ಚು ಮಾಡು, ಪ್ರೀತಿಸುವ ಸುಖ ಉಣಿಸು’ ಎಂದು ಪ್ರೀತಿಯನ್ನು ಪ್ರೀತಿಸುತ್ತಾ...

- ಪರಶುರಾಮ ಕಲಾಲ್

ಗುರುವಾರ, ಫೆಬ್ರವರಿ 5, 2009

ಕಟ್ಟಕಡೆಯ ಕನಸು



(ಇನ್ನು ಮುಂದೆ ಅರುಣ್ ಜೋಳದಕೂಡ್ಲಿಗಿ ತನ್ನ "ಕವಿ ಕಾಲಂ" ಮೂಲಕ ಕನ್ನಡದ ಇಷ್ಡಪಡಬಹುದಾದ ಕವನಗಳನ್ನು ನಿಮ್ಮ ಮುಂದೆ ತರಲಿದ್ದಾರೆ. ಈ ಕಾಲಂ ನ್ನು ಅವನ ಕವನದಿಂದಲೇ ಪ್ರಾರಂಬಿಸುತ್ತಿದ್ದೇವೆ.)

ಇದು ನೆಲದ ಜೊತೆ ಜೀವ ಬೆಸೆದವರ
ಕಟ್ಟಕಡೆಯ ಕನಸು
ಆಕಾಶದ ಆಷ್ಟೂ ನಕ್ಷತ್ರಗಳಿಂದ
ಹಗ್ಗಗಳು ಚಾಚಿಕೊಂಡವು.
ನಕ್ಷತ್ರ ಬಿಳಲುಗಳ ಕಂಡು ವಿಜ್ಙಾನ ಬೆರಗಾಯಿತು.
ಕೆಲವರು ಜೋಕಾಲಿ ಕಟ್ಟಿ ಪ್ರಿಯರ ಕೂರಿಸಿ ತೂಗಿದರು
ಸರಕಾರ ಇಳಿಬಿದ್ದ ಹಗ್ಗಗಳ
ಕೊಯ್ದು ಹಾಕಲು ಕೂಲಿಗಳಿಗೆ ಗುತ್ತಿಗೆ ಕೊಟ್ಟಿತು.
ಇನ್ನು ಕೆಲವರು ಹಗ್ಗ ಹಿಡಿದು ನಕ್ಷತ್ರ ಸಿಗುವವರೆಗೂ
ಮೇಲೇರುತ್ತಲೇ ಕಣ್ಮರೆಯಾದರು
ಕವಿಯೊಬ್ಬ ಬರೆದ ಇದು ಮಳೆಯ ಹಗ್ಗದಾ ಕನಸು.
ನೆಲವೆ ಹೊರೆಯಾದ ರೈತರೆಲ್ಲಾ ಜೊತೆಯಾದರು
ನಕ್ಷತ್ರದ ಬಿಳಲುಗಳಿಗೆ ವಂದಿಸಿದರು
ಜೋತು ಬೀಳುವ ತಮ್ಮ ಭಾರ ಹೊರುವ
ಶಕ್ತಿಯು ನಕ್ಷತ್ರಗಳಿಗೆ ಬರಲೆಂದು ಮೊರೆಯಿಟ್ಟರು !
ಚಾಕಚಕ್ಯತೆಯಲ್ಲಿ ಸರಗುಣಿಕಿ ಹಾಕಿದರು
ಎಲ್ಲರೂ ಕುತ್ತಿಗೆಗೆ ಬಿಗಿದು ಸಿದ್ದವಾದರು
ನೆಲವೇ ಇಂಚಿಂಚು ಕುಸಿಯತೊಡಗಿತು !