ಶನಿವಾರ, ಡಿಸೆಂಬರ್ 27, 2008

ಇವರು ಯಾರು ಬಲ್ಲಿರೇನು?



`ಮಣ್ಣು ಸೇರಿತು ಬೀಜ', `ತಮಂಧದ ಕೇಡು', `ಸವಾರಿ' ಕಥಾ ಸಂಕಲನಗಳಿಂದ ಪರಿಚಿತರಾದ ಕತೆಗಾರರು ಯಾರೆಂದು ಗೊತ್ತಾಗಿರಬೇಕಲ್ಲವೆ? ಹೌದು ಅವರೇ ಡಾ.ಅಮರೇಶ್ ನುಗಡೋಣಿಯವರು. ಇವರು ಈ ಹಿಂದೆ ಕವಿಗಳೂ ಆಗಿದ್ದರು ಎಂಬುದು ತಮಗೆ ಗೊತ್ತಿರಲಿಕ್ಕಿಲ್ಲ. ಕವನ ರಚನೆಯ ಮೂಲಕ ಇವರು ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. 1982ರಲ್ಲಿ ಬಿ.ಎ.ಪದವಿಯಲ್ಲಿ ಓದುತ್ತಿದ್ದಾಗ ಪ್ರಕಟಗೊಂಡ `ನೀನು ಅವರು ಪರಿಸರ' ಸಂಕಲನದ ಒಂದು ಪದ್ಯ ಮತ್ತು ಅವರ ಅಪರೂಪದ ಭಾವಚಿತ್ರ ಕೆಳಗಿದೆ. ಮತ್ತೊಂದು ಸಂತೋಷದ ಸಂಗತಿಯೆಂದರೆ, ಇವರ `ಸವಾರಿ' ಕತೆ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಚಲನಚಿತ್ರವಾಗುತ್ತಿದೆ.

ಅಯ್ಯ ಸ್ವಾಮಿ
ಮನುಷ್ಯನೆಂದು ಕರೆಸಿಕೊಳ್ಳುವಾತನೆ
ನಿನ್ನ ಬದುಕನ್ನು ಬಾಳಿ ಸವೆಸಲು
ಎಚ್ಚರವಾಗಿರು
ಇಲ್ಲದಿದ್ದರೆ
ಚರಿತ್ರೆಯಲ್ಲಿ ನಿನ್ನ ಹೆಸರು
ಕಪ್ಪು ಮಸಿಯಿಂದ ಗೀಚಿ ಹಾಕುತ್ತಾರೆ
ಆವಾಗ ನೀನು ವಾಚನಾಲಯದಲ್ಲಿ
ಧೂಳ ಹೊದ್ದು ಮಲಗಿರಬೇಕಾಗುತ್ತದೆ
ಇಷ್ಟಕ್ಕೆ ಬಿಡುತ್ತಾರೆ ಎಂದುಕೊಂಡರೆ
ಅದು ನಿನ್ನ ಪುಣ್ಯ
ಕಿವಿ ಪೊರೆ ಸೀಳುವಂಥ
ಜನ ತಿರುಗುವ ಗಿಜಿಗಿಜಿ ರಸ್ತೆಯಲ್ಲಿ
ಕಟ ಬಿಸಿಲಲ್ಲಿ ನಿನ್ನ ನೆಟ್ಟಗೆ ನಿಲ್ಲಿಸುತ್ತಾರೆ
ನಿರ್ವಾಹ ಇಲ್ಲದೆ ಸುಡಬೇಕು
ಮಳೆಯಲ್ಲಿ ನೆನೆಯಬೇಕು
ಬೆರಳು ಮಾಡಿ ತೋರಿಸಿಕೊಂಡು
ಕಂಡವರ ಬಾಯಿಯ
ಹುಳ ತಿಂದ ಹಲ್ಲುಗಳ ಮಧ್ಯೆ
ನುರಿತು ಜೊಲ್ಲಿನೊಂದಿಗೆ
ಒಳಕ್ಕು ಇಲ್ಲ ಹೊರಕ್ಕು...
ಇನ್ನೂ ಮುಗಿಯಲಿಲ್ಲ
ವರ್ಷಕ್ಕೊಮ್ಮೆ ಆಚರಣೆ
ಅದು ನಿನಗಾಗಿ ನಿನ್ನ ಆತ್ಮಕ್ಕಾಗಿ ಮೌನವಾಗಿ.
ಪಾಪ! ಅದಕ್ಕಾಗಿ
ಜಗತ್ತೆನಿಸಿಕೊಳ್ಳುವ ಇಲ್ಲಿ
ತಗಣಿ ಸೊಳ್ಳೆಗಳ ಕಣ್ಣಿಗೆ ಕಾಣದೆ
ಯಾರ ಕಪ್ಪು ಮಸಿಯ ಪೆನ್ನಿನ ಬಾಯಿಗೆ
ಒಳಗಾಗದೆ ಎಲ್ಲಿಯೋ ಉಳಿದು ಬಾಳು
ಹುಟ್ಟಿದ್ದು ತಪ್ಪಾದುದ್ದಕ್ಕೆ
ಬಾಳನ್ನು ಸವೆಸುತ್ತ
ಮರೆಯಾಗಿರು ಎಚ್ಚರವಾಗಿರು

(ಅಮರೇಶ್ ನುಗಡೋಣಿಯವರ ಒಪ್ಪಿಗೆ ಇಲ್ಲದೆ ಪ್ರಕಟಿಸಿದ್ದಕ್ಕೆ ಕ್ಷಮೆ ಕೋರುತ್ತಾ)

ಶುಕ್ರವಾರ, ಡಿಸೆಂಬರ್ 26, 2008

ಮರೆಗೆ ಸರಿದಿರುವ ನಿಜವಾದ ಭಯೋತ್ಪಾದಕರು ಇವರು! ಈ ಬಗ್ಗೆಯೂ ನಾವು ಮಾತನಾಡಬೇಕಲ್ಲವೇ?


ಭಯೋತ್ಪಾದನೆಯ ಬಗ್ಗೆ ಈಗ ದೊಡ್ಡ ಗಂಟಲಿನಿಂದ ಮಾತನಾಡಲಾಗುತ್ತಿದೆ. ಈ ನಡುವೆ ಭಯೋತ್ಪಾದೆಯನ್ನು ತಡೆಯಲು ವಿಶೇಷ ಮಸೂದೆಯನ್ನು ಕೇಂದ್ರ ಸರ್ಕಾರ ತರಾತುರಿಯಲ್ಲಿ ಹೊರ ತರುತ್ತಿದೆ. ಈ ಮಸೂದೆಯಲ್ಲಿ ಏನಿದೆಯೋ ಏನೋ? ಮುಂಬೈ ಘಟನೆಯ ನಂತರವಂತೂ ಪಾಕಿಸ್ತಾನ, ಭಾರತದ ಗಡಿಯಲ್ಲಿ ಉದ್ವೇಗದ ವಾತಾವರಣ ಸೃಷ್ಠಿಯಾಗಿದೆ. ಯುದ್ದೋತ್ಸಾಹದ ಮಾತುಗಳು ಎರಡೂ ಪಾಳೇಯದಿಂದಲೂ ಹೊರಡುತ್ತಿವೆ.
ಈ ಎಲ್ಲದರ ನಡುವೆ ’ನಿಜವಾದ ಭಯೋತ್ಪಾದಕರು’ ಮರೆಗೆ ಸರಿಯುತ್ತಿದ್ದಾರೆ. ಸರ್ಕಾರಿ ಭಯೋತ್ಪಾದನೆಯಂತೂ ದೇಶಭಕ್ತಿಯ ಉನ್ಮಾದಲ್ಲಿ ಹಿರೋ ಆಗಿ ಕಾಣಿಸಿಬಿಡುತ್ತದೆ.
ನಮ್ಮ ದೇಶದ ರೈತರ ಆತ್ಮಹತ್ಯೆಗಳು, ಎಸ್.ಎ.ಜೆಡ್ ಮುಂತಾದ ಜ್ವಲಂತವಾದ ಸಮಸ್ಯೆಗಳು ಹಿಂಬದಿಗೆ ಸರಿದಿವೆ.
ಮೂಲಭೂತ ಸಮಸ್ಯೆಗಳಲ್ಲಿ ಒಂದಾಗಿರುವ ಪ್ರಾಥಮಿಕ ಆರೋಗ್ಯದ ಬಗ್ಗೆ ಒಂದಿಷ್ಟು ಅವಲೋಕನ ಮಾಡೋಣ.
’ಆರೋಗ್ಯ ಎಂದರೆ ಕೇವಲ ಖಾಯಲೆ ಇರದೇ ಇರುವಂತಹದ್ದು ಮಾತ್ರವಲ್ಲ, ದೈಹಿಕ, ಮಾನಸಿಕ, ಸಾಮಾಜಿಕ ಸುಸ್ಥಿತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆರೋಗ್ಯವು ಮಾನವ ಹಕ್ಕು ಎಂದು ಒಪ್ಪಿಕೊಂಡು, ಸರ್ವರಿಗೂ ಆರೋಗ್ಯ-ಪ್ರಾಥಮಿಕ ಆರೋಗ್ಯ ಪಾಲನೆಯಿಂದ ಮಾತ್ರ ಇದು ಸಾಧ್ಯ ಎಂದು ೧೯೭೮ರಲ್ಲಿ ಅಂದಿನ ಸೋವಿಯತ್ ರಷ್ಯಾದ ಅಲ್ಮಾ-ಆಟಾ ಎಂಬ ಊರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ನಡೆದ ಜಾಗತಿಕ ಸಮ್ಮೇಳನದಲ್ಲಿ ೧೩೪ ರಾಷ್ಟ್ರಗಳು ಘೋಷಣೆ ಮಾಡಿ ಸಹಿ ಹಾಕಿದವು, ಇದರಲ್ಲಿ ಭಾರತ ದೇಶವೂ ಒಂದು.
೧೯೯೦ರ ನಂತರ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಯಿಂದಾಗಿ ಜನಸಾಮಾನ್ಯರಿಗೆ ದೊರಕಬೇಕಿದ್ದ ಆರೋಗ್ಯ ಸೇವೆಯಿಂದ ಹಿಂದೆ ಸರಿದಿದೆ. ಆರೋಗ್ಯ ವ್ಯವಸ್ಥೆಗಾಗಿ ರಾಷ್ಟ್ರೀಯ ಉತ್ಪನ್ನದ ಶೇಕಡ ೫ರಷ್ಟು ಹಣಕಾಸು ಮೀಸಲಿಡಬೇಕೆಂದು ಸರ್ಕಾರವೇ ರಚಿಸಿದ ಭೋರೆ ಸಮಿತಿ, ಮೊದಲಿಯಾರ್ ಸಮಿತಿ, ಶ್ರೀವಾಸ್ತವ ಸಮಿತಿಗಳು ಹೇಳಿದ್ದರೂ, ಇಂದು ಆರೋಗ್ಯ ಸೇವೆಯ ವ್ಯವಸ್ಥೆಗಾಗಿ ಭಾರತ ಸರ್ಕಾರ ಕೇವಲ ಶೇಕಡ ೦.೯ ಮಾತ್ರ ಖರ್ಚು ಮಾಡುತ್ತಿದೆ. ದೇಶದ ಭದ್ರತೆಗೆಂದು ಯುದ್ಧ ಶಸ್ತ್ರಾಸ್ತ್ರಗಳಿಗೆ ಶೇಕಡಾ ೧೪ ಹಣವಿದ್ದರೆ ಅದು ಈ ಬಾರಿ ಇನ್ನೂ ಹೆಚ್ಚಾಗಲಿದೆ. ದೇಶದ ಜನರ ಪ್ರಾಥಮಿಕ ಆರೋಗ್ಯ ಭದ್ರತೆಯ ಬುಡವನ್ನೇ ಕತ್ತರಿಸುವ ಮೂಲಕ ಸುಭದ್ರ ಭಾರತ ನಿರ್ಮಾಣಕ್ಕೆ ದಾಪುಗಾಲು ಹಾಕಿದೆ.
ವಿಶ್ವಬ್ಯಾಂಕ್ ಎನ್ನುವ ಜನವಿರೋಧಿ ಹಣಕಾಸು ಸಂಸ್ಥೆಯೇ ೧೯೯೯ರಲ್ಲಿ ಆರೋಗ್ಯದ ಬಗ್ಗೆ ಕಳವಳಕಾರಿ ವರದಿ ನೀಡಿದೆ. ಆಸ್ಪತ್ರೆಗೆ ದಾಖಲಾದ ಶೇ.೪೦ಕ್ಕಿಂತಲೂ ಹೆಚ್ಚು ಜನರು ಸಾಲ ಮಾಡುತ್ತಾರೆ ಅಥವಾ ಆಸ್ತಿ ಮಾರುತ್ತಾರೆ. ಗರ್ಭಿಣಿಯರ ತಪಾಸಣೆ ಮತ್ತು ಶೇ.೪೦ಕ್ಕಿಂತ ಹೆಚ್ಚಿನ ಹೆರಿಗೆಗಳು ಖಾಸಗಿ ದವಾಖಾನೆಯಲ್ಲಿ ಆಗುತ್ತಿವೆ.
ಆಸ್ಪತ್ರೆಗೆ ದಾಖಲಾದ ಶೇ.೫೦ಕ್ಕಿಂತಲೂ ಹೆಚ್ಚಿನ ಜನ ತಮ್ಮ ವಾರ್ಷಿಕ ಆದಾಯದ ಅರ್ಧಕ್ಕಿಂತ ಹೆಚ್ಚು ಹಣವನ್ನು ಆರೋಗ್ಯಕ್ಕೆ ಖರ್ಚು ಮಾಡುತ್ತಾರೆ.
ಭಾರತದ ರಿಸರ್ವ್ ಬ್ಯಾಂಕ್ ೧೯೮೦ರ ವರದಿ ಪ್ರಕಾರ ಭಾರತದ ಗ್ರಾಮೀಣ ಜನರು ಮಾಡುವ ಸಾಲಕ್ಕೆ ಮುಖ್ಯ ಕಾರಣ ತಮ್ಮ ಮತ್ತು ತಮ್ಮ ಕುಟುಂಬದ ಖಾಯಿಲೆಗೆ ಚಿಕಿತ್ಸೆ ನೀಡುವುದೇ ಆಗಿದೆ.
ಭಾರತ ಸರ್ಕಾರದ ಅಧಿಕೃತ ಸಮೀಕ್ಷೆ ಸಂಸ್ಥೆ (ಎನ್‌ಎಸ್‌ಎಸ್‌ಓ) ಪ್ರಕಾರ ಜನಸಂಖ್ಯೆಯ ಶೇ.೪೦ಷ್ಟು ಜನರು, (ಬಡವರು) ಮಿತಿ ಮೀರಿದ ಆರೋಗ್ಯ ಸೇವೆಯ ಖರ್ಚಿನ ಕಾರಣ ಕಾಯಲೆಗೆ ಚಿಕಿತ್ಸೆ ಪಡೆಯುತ್ತಲೇ ಇಲ್ಲ. ಇದೇ ವರದಿಯು ಶೇ.೨೫ರಷ್ಟು ಗ್ರಾಮೀಣ ಜನರ ಸಾಲಕ್ಕೆ ಮುಖ್ಯ ಕಾರಣ ಕಾಯಲೆಗೆ ಚಿಕಿತ್ಸೆ ಪಡೆಯಲು ಆಗಿದೆ ಎಂದು ಗುರುತಿಸಿದೆ.
ಸರ್ಕಾರದ ಅಧಿಕೃತ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆಯ (ಎನ್‌ಎಚ್‌ಎಫ್‌ಎಸ್ ೨೦೦೫) ಪ್ರಕಾರ ಪ್ರಗತಿ ಸಾಧಿಸಿದ ರಾಜ್ಯ ಎಂದು ತನ್ನನ್ನು ತಾನೇ ಹೊಗಳಿಕೊಳ್ಳುತ್ತಿರುವ, ಸುವರ್ಣ ಕರ್ನಾಟಕ ಸಂಭ್ರದಲ್ಲಿರುವ ರಾಜ್ಯದಲ್ಲಿ ೬ವರ್ಷ ಒಳಗಿನ ಶೇ.೮೩ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ.
ರಾಜ್ಯದಲ್ಲಿ ಹುಟ್ಟುವ ಪ್ರತಿ ಒಂದುಸಾವಿರ ಮಕ್ಕಳಲ್ಲಿ ಒಂದು ವರ್ಷದೊಳಗೆ ೫೫ ಮಕ್ಕಳ ಸಾವು. ೬ವರ್ಷದೊಳಗಿನ ಮಕ್ಕಳಲ್ಲಿ ನೂರಕ್ಕೆ ಶೇ.೭೦.೪ ಮಕ್ಕಳಲ್ಲಿ ರಕ್ತಹೀನತೆ, ಶೇ. ಐವತ್ತು ಮಹಿಳೆಯರಲ್ಲಿ ರಕ್ತಹೀನತೆ, ನೂರು ಮಕ್ಕಳಲ್ಲಿ ಶೇ.೩೭.೬ ಮಕ್ಕಳಿಗೆ ಅಪೌಷ್ಠಿಕತೆ, ಶೇ.೩೫ ಮನೆಗಳು ಮಾತ್ರ ಮೂಲಭೂತ ಸೌಲಭ್ಯಗಳು ಹೊಂದಿವೆ, ಪೂರ್ಣವಾಗಿ ಲಸಿಕೆ ಪಡೆದ ಮಕ್ಕಳು ನೂರಕ್ಕೆ ಶೇ.೫೫ ಮಾತ್ರ, ರಾಜ್ಯ ಸರ್ಕಾರವು ಒಟ್ಟು ಆದಾಯದಲ್ಲಿ ಆರೋಗ್ಯದ ಮೇಲೆ ಮಾಡುತ್ತಿರುವ ಖರ್ಚು ಕೇವಲ ಶೇ.೩.೩೭ ಮಾತ್ರ!!!
ಆರೋಗ್ಯದ ಸೇವೆಯ ಒಟ್ಟಾರೆ ಖರ್ಚಿನಲ್ಲಿ ಭಾರತ ಸರ್ಕಾರದ ಪಾಲು ಕೇವಲ ಶೇ.೧೮ ಇದ್ದರೆ ಖಾಸಗಿಯವರ ಪಾಲು ಶೇ.೮೨ರಷ್ಟಿದೆ. ಬಡವರಿಗೆ ಆರೋಗ್ಯ ಸೇವೆಯ ನಿರಾಕರಣೆ, ಜನರನ್ನು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಯತ್ತ ಬಲವಂತವಾಗಿಯೇ ಅತ್ಯಂತ ನಿರ್ಲಜ್ಜವಾಗಿ ಸರ್ಕಾರಗಳು ತಳ್ಳುತ್ತಿವೆ. ಔಷಧಿ ಕಂಪನಿಗಳು, ಸ್ಕಾನಿಂಗ್, ಅಲ್ಟಾ ಸೌಂಡ್ ಇತ್ಯಾದಿ ತಾಂತ್ರಿಕತೆ, ಅನಿಯಂತ್ರಿತ ವ್ಯಾಪಾರೀಕರಣದಿಂದಾಗಿ ವೈದ್ಯಕೀಯ ಸೇವೆ ಎನ್ನುವುದೇ ಒಂದು ಅನೈತಿಕ ವ್ಯವಹಾರವಾಗಿ ಬಿಟ್ಟು ಜನಸಾಮಾನ್ಯರ ಆರೋಗ್ಯದ ಹಕ್ಕಿನ ಬಹಿರಂಗವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ವಿವಿಧ ವೈದ್ಯಕೀಯ ಕಾಲೇಜ್‌ಗಳಿಂದ ಪ್ರತಿವರ್ಷ ೩,೩೦೦ ವೈದ್ಯರು ಹೊರ ಬರುತ್ತಾರೆ. ಇವರೆಲ್ಲಾ ಎಲ್ಲಿ ಹೋಗುತ್ತಾರೆ? ಇವತ್ತು ರಾಜ್ಯದಲ್ಲಿ ೧,೬೦೦ ಪ್ರಾಥಮಿಕ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ.
ಭಾರತದ ಸಂವಿಧಾನದ ೨೧ನೇ ವಿಧಿಯಲ್ಲಿ ಸೂಚಿಸಿದ ’ಗೌರವಾನ್ವಿತ ಬದುಕಿನ ಹಕ್ಕು’ ಜನಸಾಮಾನ್ಯರಿಗೆ ಸಿಗಬೇಕಾದರೆ ಆರೋಗ್ಯದ ಹಕ್ಕು ಮೂಲಭೂತ ಹಕ್ಕಾಗಬೇಕು. ಶ್ರೀಲಂಕಾ, ಬ್ರೆಜಿಲ್, ಕ್ಯೂಬಾ ದೇಶಗಳಂತೆ ಎಲ್ಲರಿಗೂ ಆರೋಗ್ಯ ಸೇವೆಯು ಉಚಿತವಾಗಿ ಸಿಗುವಂತೆ ಆಗಬೇಕು. ಮುಖ್ಯವಾಗಿ ಸಮಗ್ರ ಪ್ರಾಥಮಿಕ ಆರೋಗ್ಯ ಪಾಲನೆಯಿಂದಲೇ ಬಡವರಿಗೆ ಆರೋಗ್ಯ ಸಾಧ್ಯ ಮತ್ತು ಇದಕ್ಕೆ ಉತ್ತಮ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆರೋಗ್ಯ ವ್ಯವಸ್ಥೆ ಅತ್ಯಗತ್ಯ. ಚಿಕಂಗ್ಯೂನ್, ಮಲೇರಿಯಾ, ಕಾಲರ, ಪೊಲಿಯೋ ಇಂತಹ ಎಷ್ಟು ರೋಗಗಳು ಮೂಲ ಕಾರಣವನ್ನು ಪತ್ತೆ ಹಚ್ಚಿ ಆರೋಗ್ಯದ ಹಿನ್ನೆಲೆಯಲ್ಲಿ ಚರಂಡಿ, ರಸ್ತೆ, ಸಾರ್ವಜನಿಕ ಶೌಚಾಲಯ, ಶುದ್ಧ ಕುಡಿಯುವ ನೀರು ಒದಗಿಸುವ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ನಾವೆಲ್ಲಾ ಜನಾರೋಗ್ಯ ಆಂದೋಲನವೊಂದಕ್ಕೆ ಮುನ್ನಡಿ ಬರೆಯಬೇಕಿದೆ. ಸರ್ಕಾರದ ಮೇಲೆ ಒತ್ತಡ ತರುವುದಕ್ಕೆ ಕೈ ಜೋಡಿಸಬೇಕಿದೆ.
- ಪರುಶುರಾಮ ಕಲಾಲ್

December 25, 2008 11:27 PM

ಗುರುವಾರ, ಡಿಸೆಂಬರ್ 18, 2008

ಮುದೆನೂರು ಸ೦ಗಜ್ಜನವರ ಅಪರೂಪದ ಫೊಟೋಗಳು





(PHOTOS-K.KARISWAMY.)

ಆ ಅಜ್ಜನೊಂದಿಗೆ ಈ ಮೊಮ್ಮಗ


ಆ ಅಜ್ಜನೊಂದಿಗೆ ಈ ಮೊಮ್ಮಗ
ಮುದೇನೂರ ಸಂಗಣ್ಣನವರ ಚೇತನಕ್ಕೆ ನುಡಿ ನಮನ
2007 ರ ಜನವರಿ ತಿಂಗಳಲ್ಲಿ ಒಂದು ನಡುಹಗಲು. ನಾವು ನಾಲ್ವರು ಗೆಳೆಯರು ಮಾತಾಡಿಕೊಂಡು ಚಿಗಟೇರಿಯಲ್ಲಿ ಮುದೇನೂರ ಸಂಗಣ್ಣನವರನ್ನು ಭೇಟಿ ಮಾಡಲು ಹೊರಟಿದ್ದೆವು. ಕವಿ ಪೀರ್ ಭಾಷಾ ಮತ್ತು ನಾನು ಹರಪನಹಳ್ಳಿ ಮಾರ್ಗವಾಗಿ ಚಿಗಟೇರಿ ಕ್ರಾಸ್ನಲ್ಲಿಳಿದು ಚಿಗಟೇರಿಯೆಡೆಗೆ ಕ್ರಮಿಸುವಾಗ ನನ್ನ ತಲೆಯಲ್ಲಿ ಅವರು ಬರೆದ ಕವಿತೆಯ ಸಾಲುಗಳೇ ತುಂಬಿ ಕೊಂಡಿದ್ದವು. ' ಆ ಅಜ್ಜ ಈ ಮೊಮ್ಮಗ ' ಕವಿತೆಯಲ್ಲಿ ಅವರು ಚಿತ್ರಿಸಿದ ಅಜ್ಜ ; ತುಂಬು ಮೈ ಧೀರ, ಬಾನೆತ್ತರದ ಹೆಮ್ಮರ, ಗುಡ್ಡ ಕಡಿದು ದೊಡ್ಡ ಹಾದಿಯ ಮಾಡಿದವ, ಪಾಪ-ಪುಣ್ಯಬಲ್ಲ ಹಮ್ಮಿಲ್ಲದ ಮಿತಿಯರಿತ ಸಂತೃಪ್ತ. ಆತ ನಿತ್ಯ ತುಂಬಿದ ಕೊಡ- ಆತ್ಮ ನಿರ್ಭರ, ಅನುದಿನದ ವಹಿವಾಟಿನಲಿ ಸಸಿನವೆನಿಸುತ ಮೆರೆದವ, ಸಮ ತಕ್ಕಡಿಯ ಹರದವ ! ಇಹಲೋಕ ಪರಲೋಕ ತಾನಿದ್ದಲ್ಲೆ ಕಾಣುತ್ತ ಪೊರೆಯುತಿಹ ಧಾರುಣಿಯೆ ಕುಲದೈವವೆಂದವ !
ಅಂತಹ ಅಜ್ಜನನ್ನು ಈ ಮೊಮ್ಮಕ್ಕಳು ಕಾಣಲೆಂದು ಹೊರಟಿದ್ದೆವು. ನಾವು ಊರು ಸೇರಿ, ಗಲ್ಲಿಗಳಲ್ಲಿ ಹಾದು ಅವರ ಅಂಗಡಿಯ ಮುಂದಿನಿಂದ ದೊಡ್ಡ ಜಗುಲಿಯ ಮನೆಯನ್ನು ಹೊಗುವಾಗ ಆ 80 ರ ಅಜ್ಜ ಎದ್ದು ಬಂದು ನಮ್ಮನ್ನು ಸ್ವಾಗತಿಸಿದ್ದರು. ತುಸು ದೂರದ ಗಂಗಾವತಿಯಿಂದ ಕವಿ ಚಂದ್ರು ತುರುವೀಹಾಳ, ನಾಟಕಕಾರ ಕರಿಸ್ವಾಮಿ ನಮಗಿಂತ ಮೊದಲೇ ಹಾಜರಿದ್ದರು. ನೀಳ ನಿಲುವಿನ ಸಂಗಣ್ಣನವರದು ಎಂದಿನದೇ ದಿರಿಸು. ಶುಭ್ರ ಬಿಳಿಯ ಬಗಲುಗಸೆ ಅಂಗಿ, ಬಿಳಿಯ ಪಂಚೆ, ಹೆಗಲ ಮೇಲೊಂದು ಶಾಲು, ಕೈಯಲ್ಲಿ ಊರುಗೋಲು. ಬೆಳ್ಳಿ ಕೂದಲ ಆ ಅಜ್ಜ ಮಮತೆಯಿಂದ ಈ ಮೊಮ್ಮಕ್ಕಳೊಂದಿಗೆ ಒಂದಿಡೀ ಹಗಲನ್ನು ಕಳೆಯುವ ಹವಣಿಕೆಯಲ್ಲಿದ್ದರೆ, ನಾವು ತಲುಪುವ ಹೊತ್ತಿಗಾಗಲೇ ನಡು ಹಗಲು ಮೀರುತ್ತಿತ್ತು.
ಅಂದು ನಾವು ಅವರೊಂದಿಗೆ ಮಾತಾಡಿದ್ದು - ಸಂವಾದವಲ್ಲ, ಸಂದರ್ಶನವಲ್ಲ, ಕಾಡು ಹರಟೆಯೂ ಅಲ್ಲ, ಜೀವಂತ ಜ್ಞಾನಕೋಶದ ಪುಟದೆದುರಿಗೆ ಕಿವಿತೆರೆದು ಕೂತ ಸಂಭ್ರಮ ಅದು! ಕನರ್ಾಟಕ ಸಕರ್ಾರ ಸುವರ್ಣ ಕನರ್ಾಟಕದ ಸಂದರ್ಭದಲ್ಲಿ ಏಕೀಕರಣ ಪ್ರಶಸ್ತಿಯನ್ನು ನೀಡಿ ಗೌರವಿಸಲ್ಪಟ್ಟ ಆ ಹಿರಿಯರ ಮಾತಿನಲ್ಲಿ ಹರಿದು ಹಂಚಿ ಹೋಗಿದ್ದ ಕರುನಾಡು ಒಂದಾದ ಕತೆಯ ಎಳೆಗಳು ಬಿಚ್ಚಿಕೊಳ್ಳುತ್ತಿದ್ದವು.
1927ರಲ್ಲಿ ದೊಡ್ಡ ಭೂಮಾಲೀಕ ಕುಟುಂಬದಲ್ಲಿ ಜನಿಸಿದ ಸಂಗಣ್ಣನವರಿಗೆ ಭಾವ ಸಿರಿವಂತಿಕೆ- ಬಾಳ ಬಡತನವೆರಡೂ ಗೊತ್ತಿದ್ದವು. ಮದನಪಲ್ಲಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಬಂದವರು ಮನೆತನದ ವಹಿವಾಟಿಗೆ ಹೆಗಲು ಕೊಡಬೇಕಾಗಿ ಬಂದ ಬಗ್ಗೆ ಅವರಲ್ಲಿ ಖೇದವಿರಲಿಲ್ಲ. ಶಾಲಾ ವಿದ್ಯಾಭ್ಯಾಸ ತುಂಡಾದರೂ ಆ ನಿತ್ಯ ಅಭ್ಯಾಸಿ ತಮ್ಮ ವ್ಯಾಪಾರ ವಹಿವಾಟಿಗಾಗಿ ತಿರುಗಾಡುತ್ತಾ ಮರಾಠಿ, ಬಂಗಾಳಿ, ಹಿಂದಿ ಭಾಷೆ ಕಲಿತವರು. ಹಾಗೆ ಕಲಿತ ಭಾಷೆ ಕನ್ನಡಕ್ಕೆ ನೇರ ಮರಾಠಿಯಿಂದ ಫಾಸಿರಾಮ ಕೋತ್ವಾಲ ದಂತಹ ನಾಟಕವನ್ನು ಒದಗಿಸಿತು. ಬಂಗಾಳಿಯಿಂದ ಕತೆ-ನಾಟಕಗಳ ಅನುವಾದ, ಅವರು ಸಂಗ್ರಹಿಸಿದ ಸಹಸ್ರಾರು ಜಾನಪದ ಕತೆಗಳಿಂದ ' ಲಕ್ಷಾಪತಿ ರಾಜನ ಕತೆ'ಯಂತಹ ಲಕ್ಷೊಪಲಕ್ಷ ಕತೆಗಳು ಜನ ಮಾನಸದ ರಂಗ ಮಂಟಪದಲ್ಲಿ ಪ್ರಕಟಗೊಂಡವು.
ಅವರ ತಂದೆ ಕೊಟ್ರಪ್ಪನವರದು ಒಂದೇ ಆಸೆ - ಮಗ ರಾಜಕಾರಣಿಯಾಗಲೆಂದು. ಅವರ ಒತ್ತಾಸೆಗೆ ಮಣಿದು 1962ರಲ್ಲಿ ಹರಪನಹಳ್ಳಿಯಿಂದ ಪ್ರಜಾ ಸೋಷಲಿಸ್ಟ್ ಪಕ್ಷದಿಂದ ಸ್ಪದರ್ಿಸಿ ಸೋತ ಮುದೇನೂರ ಸಂಗಣ್ಣ ಮುಂದೆಂದೂ ರಾಜಕಾರಣದಲ್ಲಿ ಸಕ್ರಿಯರಾಗಲಿಲ್ಲ. ಅದು ಕನ್ನಡ ನಾಟಕ, ಜಾನಪದ ಕ್ಷೇತ್ರಗಳ ಗೆಲುವು.
ಕೇಳಿಸಿಕೊಳ್ಳುವ ಕಿವಿ, ಅಪಾರ ಸಹನೆಯಿದ್ದ ಆ ಅಜ್ಜ ಸಂಗ್ರಹಿಸಿದ ಅಪಾರ ತ್ರಿಪದಿಗಳ, ಜಾನಪದ ಕತೆಗಳ ಭಂಡಾರವೇ ಅವರ ಬಳಿ ಇತ್ತು. ' ನವಿಲು ಕುಣಿದಾವ ' ಎಂಬ ತ್ರಿಪದಿಗಳ ಸಂಗ್ರಹ, 'ಗೊದಲಿಗರ ದೇವೇಂದ್ರಪ್ಪನವರ ಆಟಗಳು' ' ಗೊಂಬಿ ಗೌಡರ ಸೂತ್ರದ ಗೊಂಬಿ ಆಟಗಳು' ಮುಂತಾದ ಅವರ ಸಂಗ್ರಹಿತ ಕೃತಿಗಳು ಕನ್ನಡದ ಜಾನಪದ ಕ್ಷೇತ್ರದಲ್ಲಿ ಅವಿಸ್ಮರಣೀಯವಾದುವು. ಸಂಗ್ರಹ ಕಾರ್ಯದ ಬಗ್ಗೆ ಯಾವ ಹೆಚ್ಚುಗಾರಿಕೆಯನ್ನೂ ತೋರಗೊಡದೆ, ಭಾವ ನಿಲರ್ಿಪ್ತತೆಯಲ್ಲಿ ಅವರು ಮಾತನಾಡುವುದೇ ನಮ್ಮೆಲ್ಲರ ಬೆರಗು! ತನ್ನ ಗರ್ಭದ ಮುತ್ತು ರತ್ನ ಹೆಕ್ಕಿ ಹರವಿಟ್ಟು ತನ್ನದಲ್ಲವೆಂಬಂತಿರುವ ಸಮುದ್ರದ ನಿಲರ್ಿಪ್ತತೆ ಮತ್ತು ಗಾಂಭೀರ್ಯ ಅದು! ಜನಪದರ ಮಾತಿನಲ್ಲಿ ಹಾದು ಹೋಗುವ ನುಡಿಗಟ್ಟುಗಳನ್ನ ಹೆಕ್ಕಿ 'ಚಿಗಟೇರಿ ಪದಕೋಶ' ಬರೆದ ಆ ಅಜ್ಜನಿಗೆ ತನ್ನ ಬಗ್ಗೆ ವಿವರಿಸಲು ಪದಗಳೇ ಸಿಗುತ್ತಿರಲಿಕ್ಕಿಲ್ಲವೇ!? ನಮ್ಮೆಲ್ಲರ ಮಾತು ಅವರನ್ನು ಸುತ್ತಿ ಕನರ್ಾಟಕದ ಏಕೀಕರಣ ಹೋರಾಟ, ಜಾನಪದ ಕ್ಷೇತ್ರದಲ್ಲಿ ಆಗಬೇಕಾದ ಜರೂರು ಕೆಲಸಗಳು, ಅವರ ನಾಟಕಗಳು, ಆಗ ಅವರು ಬರೆಯುತ್ತಿದ್ದ ಬುದ್ದನ ಕುರಿತಾದ ನಾಟಕ . . . . . . ಮಾತಿನ ವ್ಯಾಪಕತೆಗೆ ಸಮಯ ಚಿಕ್ಕದಾಗುತ್ತಿದ್ದ ಆ ಹೊತ್ತು ತಡವಾಗಿ ಬಂದೆವಲ್ಲ ಎಂಬ ಪರಿತಾಪ ನಮ್ಮೆಲ್ಲರಲ್ಲಿದ್ದರೆ, ಸಂಗಣ್ಣನವರಿಗೆ ಮೊಮ್ಮಕ್ಕಳು ಚೆನ್ನಾಗಿ ಉಣ್ಣಲೆಂದು ಉಪಚರಿಸುವ ಸಡಗರ!
ಮುದೇನೂರ ಸಂಗಣ್ಣನವರ ಒಡನಾಟವೇ ವಿಶಿಷ್ಠವಾದುದು. ಮೂಲ ಬಳ್ಳಾರಿಗರೇ ಆದರೂ ಸನಿಹದ ದಾವಣಗೆರೆಯೊಂದಿಗೂ ಅವರದು ನಿಕಟ ನಂಟು. ಜೋಳದರಾಶಿ ದೊಡ್ಡನಗೌಡರಿಂದ ಈ ಹೊತ್ತಿನ ಪೀರ್ಭಾಷಾನವರೆಗೂ ಎಲ್ಲಾ ವಯೋಮಾನದ, ಮನೋಧರ್ಮದ ಬಳ್ಳಾರಿಗರೊಂದಿಗೆ ಅವರ ಸಖ್ಯವಿದ್ದರೆ ದಾವಣಗೆರೆಯಲ್ಲೂ ಜಾನಪದ ತಜ್ಞ ಡಾ. ಎಂ.ಜಿ.ಈಶ್ವರಪ್ಪನವರೊಂದಿಗೆ ಅವರದು ನಿರಂತರ ಸಂಪರ್ಕ. ಪ್ರೊ. ರಂಗನಾಥರ ಮಗನ ಮದುವೆಯ ಕವಿಗéೋಷ್ಠಿಗೆ, ಕವಯತ್ರಿ ಅರುಂಧತಿ ರಮೇಶರ ಮನೆಗೆ ಹೀಗೆ ಬಂದಾಗಲೆಲ್ಲ ಅವರನ್ನು ಇದಿರ್ಗೊಂಡು ಮಾತಾಡಿ, ಬೆನ್ನ ನೇವರಿಸಿಕೊಂಡ ನನ್ನಂತಹ ಯುವ ಪೀಳಿಗೆಯವರೂ ಅಪಾರ. ಭೌಗೋಳಿಕವಾಗಿ ಚಿಗಟೇರಿ ನೂತನ ದಾವಣಗೆರೆ ಜಿಲ್ಲೆಗೆ ಸೇರಿದ್ದರಿಂದ ಆ ಹಿರಿಯ ಜೀವ ನಮ್ಮವರೆನಿಸಿದ್ದು ನಮ್ಮ ಭಾಗ್ಯ. ಆದರೆ 'ನಾಡೋಜ' ಸಮ್ಮಾನಿತ ಆ ಹಿರಿಯ ನಾಡಿನ ಭಾಗ್ಯವೂ ಹೌದು.
ವ್ಯಾಪಾರದ ಜಾಣ್ಮೆ, ವಿದ್ವಾಂಸನ ಮಹತ್ತು, ಮನೆ ಹಿರಿಯನ ಗತ್ತು ಎಲ್ಲವನ್ನೂ ಒಳಗೊಂಡಿದ್ದ ಮುದೇನೂರ ಸಂಗಣ್ಣನವರ ವ್ಯಕ್ತಿತ್ವವನ್ನು ನಿಖರವಾಗಿ ದಾಖಲಿಸುವುದು ಅಷ್ಟು ಸುಲಭವಲ್ಲ. ಅವರ ನೇರ, ನಿಷ್ಠುರ ಮಾತಿನ ಹಿಂದೆ ದ್ವೇಷದ ಲೇಪವಿರುತ್ತಿರಲಿಲ್ಲ. ಆದರೆ ಅವರ ಅಸಮಾಧಾನ ಸಕಾರಣವಾಗಿರುತ್ತಿದ್ದುದು ಬಹಳಷ್ಟು ಜನರಿಗೆ ಅರ್ಥವಾದಂತಿರಲಿಲ್ಲ. ತಂಬಾಕಿನ ದೊಡ್ಡ ಬೆಳೆಗಾರರು, ದಲ್ಲಾಳಿಗಳೂ ಆಗಿದ್ದ ಅವರ ಮನೆತನದ ಭೂಮಾಲೀಕತ್ವ ಮತ್ತು ಮನಸ್ಸಿನ ಸಮಾಜವಾದಿ ನಿಲುವು ಎರಡನ್ನೂ ಪ್ರತ್ಯೇಕವಾಗಿ ಹೇಗೆ ಪರಿಗಣಿಸುವುದು ಎಂಬ ಗೊಂದಲವನ್ನು - ಅವರನ್ನು ಸಂದಶರ್ಿಸಿ 'ಲೋಕ ವಿರೋಧಿಗಳ ನಡುವೆ' ದಾಖಲಿಸಿದ ಪ್ರೊ. ರಹಮತ್ ತರೀಕೆರೆಯವರೂ ಸೇರಿದಂತೆ - ಎಲ್ಲಾ ಎಡಪಂಥೀಯ ಚಿಂತಕರೂ ಎದುರಿಸಿದ್ದಿದೆ. ನನ್ನಂತಹ ಕಿರಿಯನಿಗೆ ಪತ್ರ ಬರೆಯುವಾಗಲೂ ' ಆದರಣೀಯ' ಎಂದೇ ಸಂಬೋಧಿಸಿ ಒಕ್ಕಣೆ ಪ್ರಾರಂಭಿಸುತ್ತಿದ್ದ ಅವರ ಪತ್ರ ಪ್ರೀತಿಯೊಂದಿಗೇ ' ನೀವು ಪಡೆದ ಪುಸ್ತಕ ಓದುವುದು ಆಗಿದ್ದರೆ ದಯವಿಟ್ಟು ಹಿಂದಿರುಗಿಸಿ' ಎಂಬ ಒತ್ತಾಸೆಯನ್ನು ಅಷ್ಟೇ ನಿಷ್ಠುರವಾಗಿ ಹೊಂದಿರುತ್ತಿತ್ತು.
ಕೆ.ಶಿವರಾಮ ಕಾರಂತರೊಂದಿಗೆ, ಕೆ.ವಿ.ಸುಬ್ಬಣ್ಣರವರೊಂದಿಗೆ ದಶಕಗಳ ಕಾಲದ ಅವರ ಸ್ನೇಹ, ಕತರ್ೃತ್ವ ಶಕ್ತಿ, ಸೃಜನಶೀಲ ನಿಸ್ಪೃಹತೆಯನ್ನು ಈ ಮಧ್ಯ ಕನರ್ಾಟಕ ಪ್ರದೇಶ ಸಮರ್ಪಕವಾಗಿ ಬಳಸಿಕೊಂಡಿದ್ದರೆ- ಬಾಲವನದಂತೆ, ನೀನಾಸಂನಂತೆ ಸಾಂಸ್ಥಿಕವಾಗಿ ಮಹತ್ವವಾದುದನ್ನು ಪಡೆಯಬಹುದಿತ್ತೇನೋ? ಆದರೆ ಸ್ವತಃ ತಾವೇ ಒಂದು ಸಂಸ್ಥೆಯಂತೆ ಕೆಲಸ ಮಾಡಿದ ಮುದೇನೂರ ಸಂಗಣ್ಣನವರನ್ನು ಮಾತ್ರ ಪಡೆದದ್ದು - ಅದೇ ಲಭ್ಯ, ಅದು ಭಾಗ್ಯ.
21ನೆಯ ಜಾನಪದ ಸಮ್ಮೇಳನದ ಅಧ್ಯಕ್ಷತೆ, ದಾವಣಗೆರೆಯ ಮೊದಲ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಸಮ್ಮಾನ, ನಾಟಕ ಅಕಾಡೆಮಿಯ ಫೆಲೋಶಿಪ್, ಸಾಹಿತ್ಯ ಅಕಾಡೆಮಿಯ ಬಹುಮಾನ ಹೀಗೆ ಹಲವು ಗೌರವಗಳ ಭಾರ ಹೊತ್ತ ಸಂಗಣ್ಣನವರಿಗೆ ದಾವಣಗೆರೆಯೂ ' ಮಹಲಿಂಗ ರಂಗ' ಹೆಸರಿನ ಸಾಹಿತ್ಯ ಪ್ರಶಸ್ತಿಯನ್ನು ಅಪರ್ಿಸಿ ಧನ್ಯವಾಗಿತ್ತು. ಅಂತಹ ದಾವಣಗೆರೆಯನ್ನೇ ಅವರು ಚಿರ ವಿಶ್ರಾಂತಿಗೆ ಆಯ್ದುಕೊಂಡುದು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಆ ಹಿರಿಯ ಜೀವ ಯಾರಿಗೂ ತೊಂದರೆ ಕೊಡಬಾರದೆಂದು ವಿಷಯ ಹರಡಲು ಬಿಟ್ಟಿರಲಿಲ್ಲ. ಅವರು ಕೋಮಾದಲ್ಲಿ ಜಾರುವವರೆಗೂ ಮಾಧ್ಯಮ ಮಿತ್ರರಿಗೆ ಉಸಿರಲು ಸಾಧ್ಯವಾಗಿರಲಿಲ್ಲ. 2008 ಅಕ್ಟೋಬರ್ 27 ರ ಮುಂಜಾನೆ ನಾವೆಲ್ಲಾ ಗಡಬಡಿಸಿ ಹೋಗಿ ನೋಡುವ ಹೊತ್ತಿಗೆ ಅವರು ಆಸ್ಪತ್ರೆಯ ಶೈತ್ಯಾಗಾರದಲ್ಲಿ ತಣ್ಣಗೆ ಮಲಗಿಬಿಟ್ಟಿದ್ದರು! ಅವರ ಕಣ್ಣುಗಳು ಈ ಹೊತ್ತು ಅಜ್ಞಾತನೊಬ್ಬನ ರೆಪ್ಪೆಯಲ್ಲಿ ಅವಿತು ಈ ಜಗತ್ತನ್ನು ಮತ್ತೆ ನಿಟ್ಟಿಸುತ್ತಿರುವಾಗ ಅವರು ಕಣ್ಮುಚ್ಚಿದರು ಎಂದು ಹೇಗೆ ಹೇಳಲಿ? ತಮ್ಮದೇಹವನ್ನೂ ದಾನವಾಗಿ ಇಲ್ಲೇ ಬಿಟ್ಟು ಅವರ ಚೇತನ ನಿಷ್ಕ್ರಮಿಸಿರುವಾಗ ಮತ್ತೆ ಅವರ ಕವನದ ಸಾಲುಗಳು ನೆನಪಾಗುತ್ತಿವೆ.
. . . . ಅನುಭವದ ಕೈಗೋಲ
ಹಿಡಿದು ಮುಗಿಸಿದನಲ್ಲ ಬಾಳ ಯಾತ್ರೆಯನು!
ಇರಲೆಬೇಕವನು ಮರಣವನೆ ಗೆಲಿದ ಮಹಂತ,
ಬಾಳ್ವೆಯೇ ಬೆಳಕೆಂದ ಮಹಾಸಂತ ! ಆನ0ದ ಋಗ್ವೇದಿ (ವಿಜಯಕರ್ನಾಟಕ ಪತ್ರಿಕೆಯಿ೦ದ)

ಭಾನುವಾರ, ಡಿಸೆಂಬರ್ 14, 2008

ಗೂಗಿಯ ಜೊತೆಯಲ್ಲಿ


(ರಹಮತ್ ತರೀಕೆರೆಯವರ ಅನುವಾದಿತ ಕೃತಿ ಗೂಗಿ ವಾ ಥಿಯಾಂಗೊನ 'ವಸಾಹತು ಪ್ರಜ್ಞೆ ಮತ್ತು ವಿಮೋಚನೆ' ಪುಸ್ತಕದ ಬೆನ್ನುಡಿಯಿಂದ)
ಇಂಗ್ಲಿಶೆಂದರೆ, ಜಗತ್ತಿನ ಜತೆ ನಮ್ಮ ಸಂಪರ್ಕಕ್ಕೆ ಕೊರೆದ ಕಿಂಡಿ ಎಂದು ನಂಬಿಸಲಾಗಿದೆ. ಆದರೆ ಇಂಗ್ಲಿಶೇ ಜಗತ್ತಿಗೂ ನಮಗೂ ಗೋಡೆಯಾಗಿದೆ ಎಂಬುದನ್ನು ನಾವು ಮರೆತಿದ್ದೇವೆ...
...ಇಂಡಿಯಾದ ವಿಶ್ವವಿದ್ಯಾಲಯಗಳಲ್ಲಿ ಯುರೋಪಿಯನ್ ಭಾಷೆಗಳನ್ನು ಕಲಿಸುವ ವ್ಯವಸ್ಥೆಯಿದೆ. ಆದರೆ ಆಫ್ರಿಕದಲ್ಲಿ ಮಿಲಿಯಗಟ್ಟಲೆ ಜನರಾಡುವ ಸ್ವಾಹಿಲಿಯಲ್ಲಿ ಬರೆಯುವ ಲೇಖಕನೊಬ್ಬ ನಮಗೆ ಇಂಗ್ಲಿಶ್ ಕಾಲುವೆಯ ಮೂಲಕವೇ ಬರಬೇಕಾಗಿದೆ. ಇಂಗ್ಲಿಶು ಜಗತ್ತಿನ ಜತೆ ನಮ್ಮ ಸಂಬಂಧಗಳನ್ನು ನಿಯಂತ್ರಿಸುವ ರೀತಿಯಿದು...
...ಕನ್ನಡ ಸ್ವಾಹಿಲಿಗಳ ಮಾತಿರಲಿ, ಕನ್ನಡವು ತನ್ನ ಸೋದರ ಭಾಷೆಯೊಡನೆ ಬೌದ್ಧಿಕ ಸಂವಾದ ಮಾಡಲ ಕೂಡ ಇಂಗ್ಲಿಶನ್ನು ನಮ್ಮಬೇಕಾಗಿದೆ... ಎಲ್ಲ ಬಗೆಯಲ್ಲೂ ನಮಗೆ ಹತ್ತಿರವಿರುವ ಮಲೆಯಾಳದ ತುಳ್ಳಲ್ ಕವಿ ನಂಬಿಯಾರನಿತಗಿಂತ ಇಂಗ್ಲಿಶಿನ ಛಾಸರ್, ಮಿಲ್ಟನ್ ನಮಗೆ ಹೆಚ್ಚು ಗೊತ್ತಿರುತ್ತಾರೆ. ಆಳುವ ಭಾಷೆ ಮತ್ತು ಅದರ ಸಂಸ್ಕೃತಿಗಳು ಜಾಗತಿಕವಾಗಿ ನಮ್ಮ ಆಯ್ಕೆಗಳನ್ನು ಕೇವಲ ಸಾಹಿತ್ಯಕ-ಸಾಂಸ್ಕೃತಿಕವಾಗಿ ನಿಯಂತ್ರಿಸುವುದಿಲ್ಲ, ದೃಷ್ಟಿಕೋನವನ್ನು ಸಹ ತಿದ್ದುತ್ತವೆ...
...ಹೀಗಿದ್ದರೂ ನಮ್ಮ ಆಯ್ಕೆಯನ್ನು ನಮ್ಮ ದೃಷ್ಟಿಯನ್ನು ತಿರುಚುವಂಥ ಭಾಷೆಯ ಹಂಗನ್ನೇ ಬಯಸುತ್ತೇವೆ. ಚಾರಿತ್ರಿಕವಾಗಿ ನಿರ್ಮಾಣಗೊಳ್ಳುವ ಇಂಥ ವಿಷಮ ಪರಿಸ್ಥಿತಿಯನ್ನು ದಾಟಲೆಂದೇ ಹಾದಿಹುಡುಕುತ್ತ, ಗೂಗಿಯ ಚಿಂತನೆಗಳು ಹುಟ್ಟಿಕೊಂಡಿವೆ...
...ಗೂಗಿ ವಾ ಥಿಯೊಂಗೊ ಬ್ರಿಟಿಶರ ಆಳ್ವಿಕೆಯಲ್ಲಿದ್ದ ಕೀನ್ಯಾದಲ್ಲಿ ಹುಟ್ಟಿದವರು. ಇಂಗ್ಲಿಶ್ ವಿದ್ಯಾಭ್ಯಾಸವನ್ನು ಪಡೆದ ಗೂಗಿ ತಮ್ಮ ಸಾಹಿತ್ಯವನ್ನು ಇಂಗ್ಲಿಶಿನಲ್ಲೆ ಶುರು ಮಾಡಿದರು... ತನ್ನ ದೇಶದ ಜನ ಹೋರಾಟಗಳಲ್ಲಿ ತೊಡಗಿಕೊಂಡ ಮೇಲೆ ಗೂಗಿಗೆ ಇಂಗ್ಲಿಶಿನಲ್ಲಿ ಬರೆಯುತ್ತಿರುವ ತಾತ್ವಿಕ ವೈರುಧ್ಯ ಗೊತ್ತಾಯಿತು... ತಮ್ಮೆಲ್ಲ ಬರವಣಿಗೆಯಿಂದ ಇಂಗ್ಲಿಶನ್ನು ಹೊರಹಾಕಿದರು...
Decolonising the Mind ಅವರು ಇಂಗ್ಲಿಶಿಗೆ ಕೊನೆಯ ವಿದಾಯ ಹೇಳಿರುವ ಪುಸ್ತಕವಾಗಿದೆ. ಭಾಷೆ ಕುರಿತು ಗೂತಿಯ ಈ ನಿಲುವು ಜನ ಚಳುವಳಿಗಳು ಒಬ್ಬ ಲೇಖಕನಿಗೆ ಕೊಡುವ ವಿವೇಕದ ಸಾಕ್ಷಿಯಂತಿದೆ.
- ರಹಮತ್ ತರೀಕರೆ

ಶನಿವಾರ, ಡಿಸೆಂಬರ್ 13, 2008

ದಿನ ದೂರವಿಲ್ಲ


(ನಮ್ಮೆಲ್ಲರ ಆತ್ಮೀಯ ಗೆಳತಿ ಅಕ್ಷತಾಳ ಕವನ ಸಂಕಲನ `ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ' ದ ಮನಸ್ಸಿಗೆ ಹಿಡಿಸಿದ ಒಂದು ಕವನ ಓದಿಕೊಳ್ಳೋಣ)
ಶಾಯಿಯ ಮೂಲಕ
ಮುರ್ತರೂಪ ಕೊಟ್ಟಿದ್ದೇವೆ
ನಮ್ಮ ಆಳದ ವ್ಯಂಗ್ಯಗಳಿಗೆ
ಕರುಳಿನ ನೋವು ಕರುಳ
ತಟ್ಟುವುದಿಲ್ಲ ಸಂಗಾತಿ
ಕೊರಳುಗಳ ಸೊಲ್ಲಿಗೆ
ಮನಮಿಡಿಯದೆ ಕಲ್ಲಾಯಿತಲ್ಲ

ಬರಹದ ರೂಪ ಕೊಟ್ಟೆವಲ್ಲ ಸಂಗಾತಿ
ಮನದಾಳದ ವ್ಯಂಗ್ಯಗಳಿಗೆ
ಇನ್ನೇನಿದ್ದರೂ ಕುಚೋದ್ಯ ಪ್ರಚೋದನೆ
ಸಂಶಯ ಬಿತ್ತುವ ಉಳುಮೆ

ಬಲಾಢ್ಯರನ್ನು ಮೆಚ್ಚಿಸಲು
ಬಳಲಿದವರನ್ನು ಬಲಿಪಶು ಮಾಡಿದ್ದೇವೆ
ಅಕ್ಷರವಾಗಬೇಕಾಗಿದ್ದ ಷಾಯಿಯ
ವಿಷವಾಗಿ ಹರಡಿದ್ದೇವೆ ಸಂಗಾತಿ
ನಮ್ಮ ಆತ್ಮವಂಚನೆಗೆ ಜನಪರರು
ಬೆಲೆ ತೆರುವ ಹಾಗೆ ಮಾಡಿದ್ದೇವೆ

ನಮ್ಮ ಆಳದ ವ್ಯಂಗ್ಯಗಳ
ತೀರದ ದಾಹಕ್ಕೆ
ಬೇರೆಯವರನ್ನು ಬೆತ್ತಲೆ
ಮಾಡ ಹೊರಟಿರುವ
ನಮ್ಮ ಆತ್ಮವಂಚನೆಗೆ ಕಡಿವಾಣ
ಬಿಗಿಯದಿದ್ದರೆ ಸಂಗಾತಿ
ನಾವು ಬೆತ್ತಲಾಗುವ ದಿನ
ದೂರವಿಲ್ಲ

ಶುಕ್ರವಾರ, ಡಿಸೆಂಬರ್ 12, 2008



ಪೀರ್ ಬಾಶ ಅವರ ಪುಸ್ತಕದ ಹಿ೦ದೂ ಪತ್ರಿಕೆಯ ವಿಮರ್ಶೆ
Untold stories, unsung heroes
Samajavadi Horatagaraara Sandarshana

Rama manohara Lohiya Adhyana Peetha, Kannda University

“Samajavadi Horatagaarara sandarshana” edited by B.Peer Basha a young poet, activist and a commited socialist of Marxist persuasion, is a unique attempt in reconstructing the history of Karnataka through the lives of socialist movement in Karnataka. This unusual, but significant book, is brought out by Dr. Ram manohar Lohia Adhyana Peetha of Kannada University, headed by another well-known scholar and cultural critique of our times, Rahamat Tarikere.
The book contains long interviews of eight veterans of Karnataks’s socialist movement namely T.S. Ponnammal, K.G. Maheshwarappa, Ammembala anand, Neelagangayya Poojar, K.Sadashiva Karant, Kashinath belure, Abbigere virupakshappa, and Ammembala Balappa. Even though the interviews are unstructured, the story narrated by these makers of history also provides a complex narrative of several parties, individuals and historic movements and hence becomes a narrative of strengths and limitations of Indian politics and the social movements at the same time.
For each one of them, politics is also a moral value to be adopted in persona life. Hence most of them have vented their opinions about the past and the present without mincing words.
One can see a broad concurrence on issues like collapse of socialist movement and Devraj Urs initiated land reforms as well as communalism. If they differ, it’s the views they hold on Naxalism. In fact, editor Peer Basha’s wonderful and thought provoking preface to the book puts the whole thing in a larger perspective. He critically analyses the Lohiate politically analyses the Lohiyaite political thought and his tools for social change-Spade, Jail and Vote- and also describes how these concepts were diluted over a period of time in the pretext of pragmatic politics. In his incisive critique of the Lohiaite ideology and its practice in Karnataka, he raises several important questions of historical significance. This book is important for more than one reason.
It is for the first time that an attempt has been made to record the history of various movements in the state, that had instituti9nal support. The form of interview as a methodology is also a unique attempt.
After reading the book, one question haunts. For most of our creative writers, Lohia and his writings held great influence in spirit. However, in letter, activism was always ridiculed either as manifest eccentricity or as masked vested interest. Ironically, despite such contradictions, even what seemed like a peaceful co-existence, had never managed to resolve the individual-centric preoccupations of the Navya in them.
- SHIVASUNDAR

ಬುಧವಾರ, ಡಿಸೆಂಬರ್ 10, 2008

ಒಂದು ದಿನಚರಿ



ಕಣ್ಣು ತೆರೆಯಲೇ ಭಯ
ಹೆದರಿ ಮಂಜುಗತ್ತಲೆಗಲ್ಲ
ಬೆಳಕಿಗೆ ಕೊಡಬೇಕಾದ
ಉತ್ತರದಿಂದ

ನೆತ್ತಿ ಸೆರಗು ಜಾರದಂತೆ
ಮನೆಯ ಹೊಸ್ತಿಲಿನೊಂದಿಗೆ
ಹೃದಯಕ್ಕೂ ಮೊಳೆ
ಬಡಿಸಿಕೊಂಡ ದಿನದಿಂದ
ಗಂಡನ ಹೆಸರೇಳಿ
ತನ್ನನ್ನೇ ಮರೆತ ಮರೆವು

ಕುಳಿ ಬಿದ್ದ ಕಣ್ಣಿಗೆ
ಮರೀಚಿಕೆಯಾದ ಕನಸುಗಳು
ಬೆಳದಿಂಗಳ ಬಯಕೆಗಳ
ಸುಟ್ಟ ಕಾಮಕೇಳಿಯ ರಾತ್ರಿಗಳು
ಸಾಂತ್ವಾನ ಹೇಳಲರಿಯದ ಮುೂಲೆಗೆ
ಅರ್ಥವಾಗದ ನಿವೇದನೆ
ಚುಕ್ಕಿಗಳ ನೋಡಿ ನೋಟ
ಮರೆತಾಳೆಂದರೂ
ಮುಗಿಲ ಮರೆಮಾಚಿದ ಮಾಳಿಗೆ
ಯಾತನೆಯ ಮೌನದ ಪುಟಕ್ಕೆ
ಸ್ವಚ್ಛಂದ ಬಯಸಿ ಗೆಳತಿ
ಬರೆದಿಟ್ಟ ದಿನಚರಿ

ಧರಿಸಿದ್ದೆಲ್ಲವ ಕಳಚಿ
ಹಂಡೆ ಕಟ್ಟೆಗಿಟ್ಟು
ಬೆನ್ನ ಮೇಲೆ ನಿರಾಳ
ಹೆರಳ ರಾಶಿ ಚೆಲ್ಲಿ
ಹಾಯೆನಿಸುವ
ಬಿಸಿನೀರಿನ ಆವಿಯೊಂದಿಗೆ
ತನ್ನ ಬಿಡುಗಡೆ
ಇಡೀ ಜಗತ್ತು
ಬಚ್ಚಲು ಮನೆಯಾದಂದು!

ಟಿ.ಎಂ. ಉಷಾರಾಣಿ, ಹೂವಿನಹಡಗಲಿ

ಭಾನುವಾರ, ಡಿಸೆಂಬರ್ 7, 2008

ನಿಮ್ಮಲ್ಲೊಂದು ಸಣ್ಣ ಪ್ರಾರ್ಥನೆ




1
ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ
ಅವಳು ನಿನ್ನ ಹಸೆಮಣೆಯ ನಿರ್ಜೀವ ದೇಹವಾಗುತ್ತಿರಲಿಲ್ಲ
ಅವಳ ಮನೆ ಗೋಡೆ ಮೇಲಿನ ಹಲ್ಲಿಯ ಕಣ್ಣುಗಳ
ದಿಟ್ಟಿಸಿ ನೋಡಿ ದಿಕ್ಕೆಡಬೇಡಿ, ಅಲ್ಲಿ ನಮ್ಮ ಪ್ರೇಮದ ಚಿತ್ರಗಳು ಬಿಕ್ಕಳಿಸುತ್ತಿವೆ.
ಆ ಹಲ್ಲಿಯ ಲೊಚಗುಟ್ಟುವಿಕೆಯ ಭಾಷೆ ನಿಮಗೆ ತಿಳಿಯದಿದ್ದದ್ದೇ ಒಳ್ಳೆಯದು
ಅದು ಸಾವಿರ ಬಾರಿ ಆರ್ತವಾಗಿ ನಿಮ್ಮಲ್ಲಿ ಮೊರೆಯಿಟ್ಟಿರುತ್ತದೆ
ಅವಳ ಹಿಡಿಯಾಗಿ ಹಿಂಡಿದರೆ ನಿನ್ನ ನೆನಪಿನ ಒಂದು ಕಣ ಹೊರಬಿದ್ದರೂ
ನಾನು ನೇಣಿಗೆ ತಲೆಕೊಟ್ಟು ನಿಶ್ಚಿಂತೆಯಿಂದ ಪ್ರಾಣಬಿಡುವೆ ಎಂದು

2
ತಮ್ಮ ಯೌವ್ವನವ ತಣ್ಣಗೆ ದಹಿಸಿ ಮುಪ್ಪಾದ
ಸ್ವರ್ಗದ ಎಷ್ಟೊಂದು ಕೋಣೆಯ ಬಾಗಿಲುಗಳನ್ನು ನಾವಿಬ್ಬರೂ ತೆರೆದು
ಸುಖದ ಬತ್ತಿ ಹಚ್ಚಿ ಕೋಣೆಗೆ ಯೌವ್ವನದ ಕಿಚ್ಚ ಹಚ್ಚಬೇಕೆಂದಿದ್ದೆವು
ನಿಮ್ಮಲೊಂದು ಸಣ್ಣ ಪ್ರಾರ್ಥನೆ
ಪುರುಷತ್ವದ ಸೋಗಲಾಡಿತನದ ಚಿತ್ರಗಳ
ಅವಳ ಮನದ ಕೋಣೆ ತುಂಬ ಅಂಟಿಸಿ
ಮುಊರು ಕಾಸಿನ ಸಿನಿಮಾ ಹೀರೋನಂತೆ ಪೋಜು ಕೊಡಬೇಡಿ

3
ಗಂಡ ಹೆಂಡಿರೆಂಬ ಚಿತ್ರವ ದಗದಗನೆ ಉರಿಸಿ ಚಳಿ ಕಾಯಿಸಿಕೊಂಡು
ನಾವಿಬ್ಬರೂ ಅದರ ಬೂದಿ ಇರದಂತೆ ಕೊಡವಿ
ಒಬ್ಬರೊಳಗೊಬ್ಬರು ಕಳೆದು ಹೋಗಿ
ಕಳೆದದ್ದ ಇನ್ನೆಂದೂ ಹುಡುಕದಂತೆ ಬದುಕಬೇಕೆಂದಿದ್ದೆವು
ನಿಮ್ಮಲ್ಲೊಂದು ಸಣ್ಣ ಪ್ರಾರ್ಥನೆ
ಹೂವಿನಂತವಳ ಜತೆ ನೀವು ಕಬ್ಬಿಣವಾಗುವ ಕನಸೂ
ನಿಮ್ಮ ಮನೆ ಪ್ರವೇಶಿಸದಂತೆ ಬಾಗಿಲುಗಳಿಗೆ ತಾಕೀತು ಮಾಡಿರಿ
ಇರುವೆ ಕಾಲು ಮುರಿದರೂ ಶ್ರುಶೂಷೆ ಮಾಡಿ
ದಿನಗಟ್ಟಲೆ ದು:ಖಿಸುವ ಅವಳ ಮನದ ಮೇಲೆ
ನೀವು ಒರಟೊರಟಾಗಿ ನಡೆದು ಬಿಡಬೇಡಿ

4
ನಾವಿಬ್ಬರೂ ಜಗದ ಕ್ರೌರ್ಯಕ್ಕೆ ತಾಯ್ತನವ ತೊಟ್ಟುತೊಟ್ಟು ಕುಡಿಸಿ
ಅದರ ಉರಿಗಣ್ಣ ತಣ್ಣಗಾಗಿಸಿ ಮನುಷ್ಯ ಸಹಜ ಕ್ಲೀಷೆಗಳ ದಹಿಸಿ
ಜಗದ ನಿಚ್ಚಳ ಬದುಕ ಕಣ್ತುಂಬಿಕೊಳ್ಳಬೇಕೆಂಬ ಕನಸು ಕಂಡಿದ್ದೆವು
ನಿಮ್ಮಲ್ಲೊಂದು ಸಣ್ಣ ಪ್ರಾರ್ಥನೆ
ಅವಳ ತಾಯ್ತನದ ಬೆಚ್ಚಗಿನ ಗೂಡು ಕಿತ್ತು
ಧರ್ಮದ ಗೋಡೆಕಟ್ಟಿ ಅದಕ್ಕೆ ಮೊಳೆ ಹೊಡೆದು
ನಿಮ್ಮಿಬ್ಬರ ಫೋಟೋ ತೂಗುಹಾಕಿ ಜಗದೆದುರು ಹರಾಜಿಗಿಡಬೇಡಿ.

(ಅರುಣ್ ಜೋಳದಕೂಡ್ಲಿಗಿ ನಮ್ಮ ನಡುವಿನ ತರುಣ(!) ಕವಿ. ಹಂಪಿ ಕನ್ನಡ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ. ಹಂಪಿಯ ಸ್ಮಾರಕ, ದಿಬ್ಬ ಹಾಗೂ ಹಿಮಾಲಯದಲ್ಲಿ ಆಗಾಗ ಕಳೆದು ಹೋಗುವುದು ಇವನ ಹವ್ಯಾಸ. ಇವನ ಇತ್ತೀಚಿನ ಕವನ ಇಲ್ಲಿದೆ. ಓದಿ ಪ್ರತಿಕ್ರಿಯಿಸಿ. ಕವಿತೆ ಹಿಡಿಸಿದರೆ, ಬ್ಲಾಗ್ ನ್ನು ಹೊಗಳಿ, ಹಿಡಿಸದಿದ್ದರೆ ಯಾವುದೇ ಮುಲಾಜಿಲ್ಲದೆ ಕವಿಯನ್ನು ಟೀಕಿಸಿ...)

ಹಿಂಗುವುದೇ ತನು ಸೂತಕ ಹಿಂಗಲಾರದೇ ಮನ ಸೂತಕ?

(ಪ್ರಜಾವಾಣಿಯಲ್ಲಿ ಪ್ರಕಟವಾದ ಪ್ರೊ.ಬಿ.ಎ.ವಿವೇಕ್ ರೈರವರ ಲೇಖನದ ಆಯ್ದ ಭಾಗ)
ಧರ್ಮವೊಂದು ಗನ್ನಿನಿಂದ ಕೊಲ್ಲುವ ಮೂಲಕ, ರಕ್ತ ಹರಿಸುವ ಮೂಲಕ ತನ್ನ ಕ್ರೂರ ಪ್ರದರ್ಶನ ಮಾಡುವಲ್ಲಿ ಹಣದ ಬಲ ಖಂಡಿತವಾಗಿಯೂ ಪ್ರಧಾನವಾಗಿದೆ. ಪಂಚತಾರಾ ಹೋಟೆಲ್ ಮತ್ತು ಎಕೆ 47 ಇವೆರೆಡೂ ಹಣದ ಕೊಬ್ಬಿನ ಎರಡು ರೂಪಕಗಳು. ಒಂದು ಭೋಗ, ಇನ್ನೊಂದು ಹಿಂಸೆ. ಭದ್ರತೆ, ಹುನ್ನಾರ, ತಂತ್ರಗಾರಿಕೆ-ಇವೆಲ್ಲಾ ರಾಜಕೀಯ ವ್ಯವಸ್ಥೆಯನ್ನು ಬಲಪಡಿಸಬಹುದು: ಆದರೆ ಜನಸಾಮಾನ್ಯರ ಪಾಲಿಗೆ ಇವು ಭಯ ಮತ್ತು ಆತಂಕದ ಕರಾಳ ಸ್ವಪ್ನಗಳು...
ಯಾವುದೇ ವ್ಯಕ್ತಿ ಸ್ವಭಾವತ: ಮತಾಂಧ ಆಗಿರುವುದಿಲ್ಲ. ಆದರೆ ಒಂದು ಮತದ ಒಳಗಡೆ ತನ್ನನ್ನು ಗುರುತಿಸಿಕೊಳ್ಳುವುದು ಅನಿವಾರ್ಯ ಎಂಬ ಕೃತಕ ವಾತಾವರಣ ನಿಮರ್ಾಣವಾಗಿರುವುದು ರಾಜಕೀಯದಲ್ಲಿ ನಿಶೇಧಾತ್ಮಕ ರೂಪದಲ್ಲಿ. ಆದ್ದರಿಂದಲೇ ಇದು ಸಂಘರ್ಷವನ್ನೇ ತನ್ನ ಉದ್ದೇಶವನ್ನಾಗಿ ಇಟ್ಟುಕೊಂಡಿರುತ್ತದೆ. ರಾಜಕೀಯ ಮತ್ತು ಧಾಮರ್ಿಕ ಚಳುವಳಿಗಳು ಆಧುನಿಕ ಸಮಾಜಗಳ ಹೊಸ ಅಗತ್ಯಗಳಿಗೆ ಬೇಕಾದ ಅನನ್ಯತೆಗಳನ್ನು ರೂಪಿಸಲು ಅಶಕ್ತವಾದಾಗ ಮೂಲಭೂತವಾದದ ಪ್ರವೃತ್ತಿಯನ್ನು ಹೆಚ್ಚು ಪ್ರೋತ್ಸಾಹಿಸುತ್ತವೆ. ಮೂಲ ಪರಂಪರೆಗೆ ಹಿಂದಿರುಗಲು ಒತ್ತಾಸೆ ನೀಡುವ ಇವು ಮೂಲ ಪರಂಪರೆ ಬಗ್ಗೆ ತಮ್ಮದೇ ಆದ ಸೀಮಿತ ಹಾಗೂ ತಪ್ಪು ಕಲ್ಪನೆಗಳನ್ನು ಹೊಂದಿರುತ್ತವೆ. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಮತೀಯ ಮೂಲಭೂತವಾದ ಈ ಸ್ವರೂಪದ್ದು. ಇಲ್ಲೆಲ್ಲಾ ಮತಧರ್ಮ ಎನ್ನುವುದು ವ್ಯವಾಹಾರಿಕ ಉದ್ದೇಶಕ್ಕಾಗಿ ಬಳಕೆಯಾಗುವ ರಾಜಕೀಯ ಸಾಧನವೇ ಹೊರತು, ಅದೇ ನಿಜವಾದ ಅನನ್ಯತೆಯಾಗಿ ಉಳಿದಿಲ್ಲ.
ಜಾಗತೀಕವಾಗಿ ಬಲಿಷ್ಠ ರಾಷ್ಟ್ರಗಳು, ದುರ್ಬಲ ರಾಷ್ಟ್ರಗಳು ತಮ್ಮ ಶಕ್ತಿಯ ವಿಸ್ತರಣೆಗಾಗಿ ಮತ್ತು ದೌರ್ಬಲ್ಯವನ್ನು ಮುಚ್ಚಿಕೊಳ್ಳುವುದಕ್ಕಾಗಿ ಬಾಹ್ಯ ಯುದ್ಧ ಮತ್ತು ಗುಪ್ತ ಯುದ್ಧಗಳಿಗೆ ಬೆಂಬಲವನ್ನು ಕೊಡುತ್ತವೆ. ಅಮೇರಿಕ ಮತ್ತು ಚೀನಾದಂತಹ ರಾಷ್ಟ್ರಗಳು ಜಾಗತಿಕ ಪ್ರಭುತ್ವದ ರ್ಯಾಂಕಿಗಾಗಿ ಅನ್ಯ ದೇಶಗಳ ನಡುವಿನ ವೈಮನಸ್ಸನ್ನು, ಆಂತರಿಕ ದೌರ್ಬಲ್ಯಗಳನ್ನು ಒಂದು ಲಾಭವನ್ನಾಗಿ ಮಾಡಿಕೊಂಡು ಯುದ್ಧ ಮತ್ತು ಶಾಂತಿಯ ಮಂತ್ರಗಳನ್ನು ಒಟ್ಟಿಗೆ ಜಪಿಸುತ್ತವೆ. ಘಾಸಿ ಮಾಡುವ ಮತ್ತು ಆರೈಕೆ ಮಾಡುವ ಎರಡೂ ಕೆಲಸಗಳನ್ನು ಒಟ್ಟಿಗೇ ಮಾಡುವ ಕಾರ್ಯತಂತ್ರ ರಾಷ್ಟ್ರೀಯತೆಗೆ ಬಲಿಷ್ಠತೆಯನ್ನು ತಂದುಕೊಡುವ ಒಂದು ಮುಖ್ಯವಾದ ಮಾರ್ಗ. ಆಥರ್ಿಕವಾಗಿ ದುರ್ಬಲವಾಗಿರುವ, ಆದರೆ ಹೊರ ಜಗತ್ತಿಗೆ ಆಧುನಿಕ ಸೌಕರ್ಯಗಳ ಸಂಪತ್ತುಗಳ ಪ್ರದಶರ್ಿಸುವ ದೇಶಗಳು ತಮ್ಮ ಆಡಳಿತದ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಆಕ್ರಮಣಶೀಲತೆಯನ್ನು ಪ್ರಚೋದಿಸುವ ಕೆಲಸಗಳನ್ನು ನಿರಂತರವಾಗಿ ಮಾಡುತ್ತಲಿದೆ. ಪ್ರಜೆಗಳನ್ನು ಕಾಯಲು ಸಾಧ್ಯವಾಗದವರು ಅನ್ಯರ ಮೇಲೆ ಆಕ್ರಮಣ ಮಾಡಲು ಅಭಿಪ್ರಾಯ ನಿಮರ್ಾಣದ ಕಾಖರ್ಾನೆಗಳನ್ನು ತೆರೆದು ದ್ವೇಷದ ಉತ್ಪನ್ನಗಳನ್ನು ಉತ್ಪಾದಿಸಿ, ಜನರನ್ನು ನಿರಂತರ ಭಯೋತ್ಪಾದನೆಯ ಯುದ್ಧದ ಸರ್ಪದ ಹೆಡೆ ನೆರಳಲ್ಲಿ ಬದುಕಬೇಕಾದ ಅನಿವಾರ್ಯತೆಗೆ ತಂದೊಡ್ಡುತ್ತಾರೆ.
ಪಾಕಿಸ್ತಾನ, ಬಾಂಗ್ಲದೇಶದಂತಹ ದೇಶಗಳು ದ್ವೇಷದ ಕಾಖರ್ಾನೆಗಳಲ್ಲಿ ಮತಧರ್ಮದ ಸರಕುಗಳನ್ನು ನಿಮರ್ಿಸುತ್ತಿರುವ ಕ್ರಮ ಈ ಬಗೆಯದ್ದು. ಇದು ಖಂಡಿತ ಅಲ್ಲಿನ ಜನಗಳ ನಿಜವಾದ ನಿಜವಾದ ನೆಲೆಯ ಭಾವನೆಗಳಲ್ಲ. ಇಂತಹ ಸ್ಥಿತಿಯಲ್ಲಿ ಭಾರತ ಯಾವುದನ್ನು ತನ್ನ ಆದರ್ಶವನ್ನಾಗಿ ಇಟ್ಟುಕೊಳ್ಳಬೇಕೆನ್ನುವುದು ನಮ್ಮ ಅನನ್ಯತೆಯ ಮುಖ್ಯ ಪ್ರಶ್ನೆ. ಬಲಿಷ್ಠ ರಾಷ್ಟ್ರಗಳ ಕೊಲ್ಲುವ-ಕಾಯುವ ಮಾದರಿಯನ್ನೇ? ಆಥರ್ಿಕವಾಗಿ ನೈತಿಕವಾಗಿ ಜರ್ಜರಿತವಾಗಿರುವ ರಾಷ್ಟ್ರಗಳಿಗೆ ಪ್ರತಿರೋಧವಾಗಿ ಅವುಗಳದ್ದೇ ಮಾದರಿಯನ್ನೇ? ಈ ಎರಡಕ್ಕಿಂತಲು ಭಿನ್ನವಾಗಿ ಭಾರತದ ಪರಂಪರೆಯ ಶಕ್ತಿ, ಧೈರ್ಯ, ಛಲ, ಸೃಜನಶೀಲತೆ, ಬಹುರೂಪಿ ಬದುಕಿನ ಸಾಧ್ಯತೆ, ಕಾಯಕದ ಬಗೆಗಿನ ಅಪಾರವಾದ ನಂಬಕೆ ಮತ್ತು ಇಂತಹ ನೂರಾರು ಶಕ್ತಿಗಳನ್ನು ಕ್ರೂಢೀಕರಿಸಿದ ಬಲಿಷ್ಠ ಬಹುರೂಪಿ ಶಕ್ತಿಯೊಂದರ ನಿಮರ್ಾಣದ ಮೂಲಕ ಜಾಗತಿಕವಾಗಿ ಹೊಸ ಮಾದರಿಯೊಂದನ್ನು ಕಟ್ಟಲು ಸಾಧ್ಯವೇ?.....

ಭಾನುವಾರ, ನವೆಂಬರ್ 23, 2008

ಇಲ್ಲ, ನನಗೆ ರಾಷ್ಟ್ರವಿಲ್ಲ...

ಇಲ್ಲ
ನನಗೆ ನಿಷ್ಠೆ ಇಲ್ಲ ಈ ಗಡಿಗಳ ಮೇಲೆ
ಖಂಡಿತ ನಾನು ಬದ್ಧನಲ್ಲ
ಹುಸಿ ರಾಷ್ಟ್ರೀಯತೆಯ ಮತೀಯ ವ್ಯಾಖ್ಯಾನಕ್ಕೆ
ಆಳುವುದಕ್ಕಾಗಿಯೆ ಕಟ್ಟಿಕೊಂಡ ರಾಷ್ಟ್ರಕ್ಕೆ
ಪ್ರಜೆಗಳ ಹೆಸರಿನ ಪ್ರಭುತ್ವದ ಗಣಿತಕ್ಕೆ
ನಿಷ್ಠೆಯಿಲ್ಲ ನನಗೆ ಖಂಡಿತ. ಬದ್ಧನಲ್ಲ ನಾನು
ಶಬ್ದಗಳನ್ನೆ ಶಸ್ತ್ರವನ್ನಾಗಿಸಿ
ಕೊಂಡವರುದ್ರೋಹಿ ಎಂದರೂ ನನಗೆ ಅಳುಕಿಲ್ಲ
ಇಲ್ಲ, ನನಗೆ ರಾಷ್ಟ್ರವಿಲ್ಲ, ಭಾಷೆಯಿಲ್ಲ
ತಥಾಕಥಿತ ಧರ್ಮವಿಲ್ಲ

ಈ ನೆಲವೇ ನನ್ನ ಸೃಷ್ಟಿಯ ಮೂಲ
ಈ ನೆಲವೇ ನನ್ನ ಅನ್ನದ ಮೂಲ
ಈ ನೆಲಕ್ಕೇ ನನ್ನ ಬದುಕು ಅರ್ಪಿತ
ಈ ನೆಲಕ್ಕೇ ನನ್ನ ಸಾವೂ ಬದ್ಧ
ಈ ಅಖಂಡ ನೆಲವೇ ನನ್ನ ತಾಯಿ
ಈ ಅಖಂಡ ನೆಲವೇ ನನ್ನ ಮಾತೃಭೂಮಿ

ನನ್ನ ತಾಯಿ ಶುಭ್ರಜೋತ್ಸಾನ ಪುಲಕಿತ ಯಾಮಿನಿ ಅಲ್ಲ
ಸದಾವತ್ಸಲೇ…ಎಂದು ನಮಿಸುವ ನಟನೆ ನನಗೆ ಬೇಕಿಲ್ಲ
ನನ್ನ ನಾಡಿನ ಪರ್ವತಗಳನ್ನು
ತಾಯಿ ಮೊಲೆಗಳಿಗೆ ಹೋಲಿಸುವ
ತಾಯ್ಗಂಡ ಭಕ್ತಿ ಬೇಡ ನನಗೆ
ಹೌದು, ನಾನು ಈ ನೆಲದ ಜೀವ
ಅಖಂಡ ನೆಲವೇ ನನ್ನ ಮಾತೃಭೂಮಿ
ಸೀತೆ ನನ್ನಕ್ಕ, ಬಸವ ನನ್ನಣ್ಣ
ಶಂಭೂಕ ನನ್ನ ಬಂಧು
ಬುದ್ಧ ಮಾರ್ಗದರ್ಶಕ ದತ್ತ ನನ್ನ ಮಿತ್ರ
ತುತ್ತಿನ ತತ್ವ ಶಾಸ್ತ್ರ ನನ್ನ ಸಿದ್ಧಾಂತ
ನೈಲ್, ಆಫ್ರಿಕಾ, ದ್ರಾವಿಡಗಳಲ್ಲಿ ನನ್ನ ಕುಲಮೂಲ
ಪ್ಯಾಲೆಸ್ಪೈನಿನ ವಿಧವೆ, ರುಮೇನಿಯಾದ ಚೆಲುವೆ
ಗ್ರೀಕಿನ ಕೂಲಿ, ಫ್ರಾನ್ಸಿನ ಝಾಡಮಾಲಿ
ಚೀನಾದ ರೈತ, ಕ್ಯೂಬಾದ ಯೋಧ, ಅಫಘಾನ ಅನಾಥ
ಎಲ್ಲ, ನನ್ನ ಸಂಬಂಧಿಗಳು
ನಾನು ಈ ನೆಲದ ಸೃಷ್ಟಿ
ಅಖಂಡ ಭೂಮಂಡಲವೇ ನನ್ನ ಮನೆ
ಇಂದ್ರಪ್ರಸ್ಥ ಅಯೋಧ್ಯೆ ದಿಲ್ಲಿಗಳ
ಹತ್ಯಾರಕ್ಕೆ ಸಿಕ್ಕು ಹರಿದ ನೆತ್ತರ ವಂಶಸ್ಥ ನಾನು
ನನ್ನವರ ಕರುಳು ಬಗೆದ ರಾಜ ಖಡ್ಗಗಳ ಮೇಲೆಲ್ಲ
ಪ್ರತ್ಯಕ್ಷ ದೇವತಾ ಮುದ್ರೆಗಳು
ಹಿರೋಶಿಮಾ, ನಾಗಸಾಕಿ ಬಾಂಬುಗಳ ಮೇಲೆ ಶಾಂತಿ ಮಂತ್ರಗಳು
ಇರಾಕ್, ವಿಯೆಟ್ನಾಂ ಯುದ್ಧ ವಿಮಾನಗಳ ಮೇಲೆ
ಪ್ರಜಾಪ್ರಭುತ್ವದ ಘೋಷಗಳು
ಹಿಟ್ಲರನ ಸಾವಿನ ಶಿಬಿರಗಳಲ್ಲಿ
ದೇಶಭಕ್ತಿಯ ಸಾರಗಳು
ಪಿತೃ ಭೂ ಪುಣ್ಯಭೂಮಿಯ ಹೆಂಡದಂಗಡಿಗಳಿಗೆ
ಧರ್ಮದ ಬೋರ್ಡುಗಳು
ಕೊಲೆಗಡುಕರ ಹಣೆ ಮೇಲೆಸಂಸ್ಕೃತಿಯ ಸಂಕೇತಗಳು
ಅತ್ಯಾಚಾರಿಗಳ ಬಾಯಲ್ಲೇಕೆ ಮಾತೃವಂದನೆ ಗೀತೆ
ಎಂದು ಯಾರಿಗೆ ಕೇಳಬೇಕು ನಾನು

ಲೂಟಿಕೋರರ ಕೈಯಲ್ಲಿ
ದೇಶದ ನಕಾಶೆ ನೇತಾಡುತ್ತಿದೆ
ದಲ್ಲಾಳಿಯಂಗಡಿಯಾದ ಸಂಸತ್ತಿನಲ್ಲಿ
ಸ್ವಾತಂತ್ರ್ಯದ ಹರಾಜಿಗೆ ಟೆಂಡರ್ ಕರೆಯಲಾಗಿದೆ
ನಾನು ಈ ಲೋಕದ ಪ್ರಜೆ
ತುಳಿವ ಕಾಲುಗಳೆಲ್ಲ ನನ್ನ ಕೊರಳ ಮೇಲೆ ಇವೆ

ಇಲ್ಲ. ನನಗೆ ನಿಷ್ಠೆಯಿಲ್ಲ ಈ ಗಡಿಗಳ ಮೇಲೆ
ಖಂಡಿತ ನಾನು ಬದ್ಧನಲ್ಲ ಹುಸಿ ರಾಷ್ಟ್ರೀಯತೆಗೆ
ಪ್ರಜೆಗಳನ್ನು ಸತ್ರೋಳಿಗಳನ್ನಾಗಿಸಿದ ಪ್ರಭುತ್ವಕ್ಕೆ

- ಪೀರ್ ಬಾಷ

ಶನಿವಾರ, ನವೆಂಬರ್ 22, 2008

ಮೌನ

ಕಂಡ ಕನಸುಗಳೆಲ್ಲ ನನಸಾಗುವುದೇ ಬದುಕಿನ ನಿಜಘೋರ ಸಾಕಿ
ಗೆಲ್ಲುವ ಛಲ ಹುಟ್ಟಿಸುವ ಸೋಲ ಕಾನುವಾಸೆಯಾಗುತಿದೆ ಬದುಕಬೇಕು